ಮಂಗಳೂರು: ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸರ್ಕಾರ ವ್ಯಾಪಾರಿ ದೃಷ್ಟಿಕೋನದಿಂದ ನೋಡದೆ, ನಾಗರಿಕರಿಗೆ ನೀಡುತ್ತಿರುವ ಸೌಲಭ್ಯಗಳೆಂದು ಪರಿಗಣಿಸಿ ಸಾರಿಗೆ ನಿಗಮಗಳಿಗೆ ಆರ್ಥಿಕ ಬೆಂಬಲ ನೀಡಲಿ ಎಂದು ಕೆಎಸ್ಆರ್ ಟಿಸಿ ಸಿಬ್ಬಂದಿ ಮತ್ತು ನೌಕರರ ಫೆಡರೇಷನ್ನ ಅಧ್ಯಕ್ಷ ಹೆಚ್.ವಿ. ಅನಂತಸುಬ್ಬರಾವ್ ಒತ್ತಾಯಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಮುಂದೆ ನಮ್ಮ ಕೆಲವೊಂದು ಬೇಡಿಕೆಗಳನ್ನು ಇಡುತ್ತಿದ್ದೇವೆ. ಸರ್ಕಾರ ಸಾರಿಗೆ ನಿಗಮಗಳ ಮೇಲೆ ಹೊರಿಸಿರುವ ಮೋಟಾರು ವಾಹನ ತೆರಿಗೆಯನ್ನು ರದ್ದುಗೊಳಿಸಬೇಕು. ಸಾರಿಗೆ ನಿಗಮಗಳಿಗೆ ಹೆದ್ದಾರಿ ಸುಂಕ ವಿನಾಯಿತಿ ನೀಡಬೇಕು. ಇಂಧನದ ಮೇಲೆ ಹಾಕಿರುವ ಸುಂಕವನ್ನು ಶೇ.50ರಷ್ಟು ಕಡಿತಗೊಳಿಸಬೇಕು. ವಿದ್ಯಾರ್ಥಿಗಳ ರಿಯಾಯಿತಿ ಪಾಸ್ ಮತ್ತಿತರ ಸಾಮಾಜಿಕ ಹೊಣೆಗಾರಿಕೆಗೆ ಸರ್ಕಾರ ಬಾಕಿ ಉಳಿಸಿರುವ ಮೊತ್ತವನ್ನು ಸಾರಿಗೆ ನಿಗಮಗಳಿಗೆ ತಕ್ಷಣ ನೀಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳನ್ನು ಒಂದು ಮಾಡಬೇಕು. ಪ್ರತೀ ವರ್ಷ ಆಯವ್ಯಯದಲ್ಲಿ ಸಾರಿಗೆ ನಿಗಮಗಳಿಗೆ ಒಂದು ಸಾವಿರ ಕೋಟಿ ರೂ. ನೀಡಬೇಕು. ಸಾರಿಗೆ ನಿಗಮಗಳ ನೌಕರರಿಗೆ ವೇತನವನ್ನು ಸಂಪೂರ್ಣ ನೀಡಬೇಕೆಂದು ಹೆಚ್.ವಿ. ಅನಂತಸುಬ್ಬರಾವ್ ಆಗ್ರಹಿಸಿದರು.
ದೇಶದಲ್ಲಿ ಅತೀ ಹೆಚ್ಚು ಕಾನೂನು ಉಲ್ಲಂಘನೆ ಸರ್ಕಾರಿ ಸ್ವಾಮ್ಯದಲ್ಲಿರುವ ಸಾರಿಗೆ ನಿಗಮದಿಂದ ಆಗುತ್ತಿದೆ. ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಯೊಂದಿಗೆ ಚರ್ಚೆ ನಡೆಸಿ ವೇತನ ಒಪ್ಪಂದ ಮಾಡುವುದಕ್ಕೆ ತಿಲಾಂಜಲಿಯಿರಿಸಲಾಗಿದೆ. ಪ್ರತೀ ನಾಲ್ಕು ವರ್ಷಕ್ಕೊಮ್ಮೆ ಆಗುವ ವೇತನ ಒಪ್ಪಂದವನ್ನು ಮುರಿದು ಏಕಪಕ್ಷೀಯವಾಗಿ ಸ್ವಲ್ಪ ಸಂಬಳ ಹೆಚ್ಚಳ ಮಾಡಿ ಅದನ್ನೇ ವೇತನ ಹೆಚ್ಚಳ ಎಂದು ಹೇಳುತ್ತಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋವಿಡ್ ಬಳಿಕ ತುಟ್ಟಿ ಭತ್ತೆ ಹೆಚ್ಚಳವನ್ನು ಸ್ಥಗಿತಗೊಳಿಸಿದೆ. ರಾಜ್ಯಾದ್ಯಂತ ಪೂರ್ಣವಾಗಿ ಸಾರಿಗೆ ನಿಗಮಗಳು ಸಂಚರಿಸುತ್ತಿಲ್ಲ. ಆದ್ದರಿಂದ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಕೆಲಸ ನೀಡದೆ ಹಿಂದೆ ಕಳುಹಿಸಲಾಗುತ್ತಿದೆ. ರಜೆ ಇಲ್ಲದವರಿಗೆ ವೇತನ ಕಡಿತ ಮಾಡಲಾಗುತ್ತಿದೆ. ವೈದ್ಯಕೀಯ ಸೌಲಭ್ಯವೂ ಇಲ್ಲ. ಇದರಿಂದ ನೌಕರರ ವರ್ಗದವರಿಗೆ ಅನ್ಯಾಯವಾಗುತ್ತಿದೆ ಎಂದು ಹೆಚ್.ವಿ.ಅನಂತಸುಬ್ಬರಾವ್ ದೂರಿದರು.
ಓದಿ: ನಾಲ್ಕೂ ನಿಗಮಗಳನ್ನು ವಿಲೀನಗೊಳಿಸಿ: ಕೆಎಸ್ಆರ್ಟಿಸಿ ಫೆಡರೇಷನ್ ಅಧ್ಯಕ್ಷ ಅನಂತಸುಬ್ಬರಾವ್ ಮನವಿ
ಕೆಎಸ್ಆರ್ಟಿಸಿ ಮಂಗಳೂರು ವಿಭಾಗದ ಡಿಸಿ ಎಸ್.ಎನ್. ಅರುಣ್ ಅವರ ಮೇಲೆ ಮಹಿಳಾ ಸಿಬ್ಬಂದಿ ಮೇಲೆ ದೌರ್ಜನ್ಯ ನಡೆಸುವ ಬಗ್ಗೆ ಮಾಧ್ಯಮದವರಿಗೆ ಪ್ರಶ್ನೆಗೆ ಉತ್ತರಿಸಿದ ಅನಂತಸುಬ್ಬರಾವ್, ಈ ಬಗ್ಗೆ ನನಗೂ ದೂರುಗಳು ಬಂದಿವೆ. ಎಸ್ ಎನ್ ಅರುಣ್ ಅವರ ಮೇಲೆ ಇದಲ್ಲದೆ ಸಾಕಷ್ಟು ದೂರುಗಳು ಇವೆ. ಆತ ಕೆಟ್ಟದಾಗಿ ಮಾತನಾಡುತ್ತಾರೆ ಎಂದೂ ತಿಳಿದು ಬಂದಿದೆ. ಈ ಬಗ್ಗೆ ವಿಚಾರಣೆ ನಡೆಸಬೇಕೆಂದು ಕೆಎಸ್ಆರ್ಟಿಸಿ ಎಂಡಿಯವರಿಗೂ ಒತ್ತಾಯಿಸಿದ್ದೇನೆ. ಈ ಬಗ್ಗೆ ನಾನು ಸಚಿವರಿಗೂ ಅವರ ಮೇಲೆ ಚಾರ್ಜ್ ಶೀಟ್ ಹಾಕಲು ಒತ್ತಡ ಹಾಕುತ್ತೇನೆ ಎಂದು ಹೆಚ್.ವಿ. ಅನಂತಸುಬ್ಬರಾವ್ ಹೇಳಿದರು.