ಸುಳ್ಯ: ದಕ್ಷಿಣ ಕನ್ನಡದ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕಲ್ಲೆಂಬಿ ಎಂಬಲ್ಲಿ ಕೃಷಿ ಉದ್ದೇಶಕ್ಕಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ ಆಕಸ್ಮಿಕವಾಗಿ ಪತ್ತೆಯಾದ ಗುಹೆಯಿಂದ ಸಂಗ್ರಹಿಸಲಾದ ಮಣ್ಣಿನ ಮಡಿಕೆಗಳು ಮತ್ತು ಕುಂಬಾರಿಕೆಗಳ ತುಣುಕುಗಳ ಅಧ್ಯಯನವು ಕಬ್ಬಿಣದ ಯುಗ ಅಥವಾ ಮೆಗಾಲಿಥಿಕ್ ಕಾಲದ ಗುಹೆಯಾಗಿರಬಹುದು ಎಂದು ಪುರಾತತ್ವ ವಸ್ತುಗಳ ಸಂಶೋಧಕ ಹಾಗೂ ಮುಲ್ಕಿ ಸುಂದರರಾಮ ಶೆಟ್ಟಿ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರದ ಪ್ರಾಧ್ಯಾಪಕರಾದ ಪ್ರೋ.ಟಿ.ಮುರುಗೇಶಿ ಹೇಳಿದರು.

ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಇಲ್ಲಿ ಪತ್ತೆಯಾದ ಪುರಾತನ ವಸ್ತುಗಳು ಈ ಹಿಂದೆ ಮೂಡುಬಿದಿರೆಯ ಸಮೀಪದ ಮೂಡು ಕೊಣಾಜೆಯಲ್ಲಿ ಮತ್ತು ಕೊಡಗಿನ ಹೆಗ್ಗಡೆಹಳ್ಳಿ ಹಾಗೂ ಸಿದ್ದಲಿಂಗಪುರದ ಸಮಾಧಿಯಲ್ಲಿ ಪತ್ತೆಯಾದ ಮಡಿಕೆಗಳನ್ನು ಹೋಲುತ್ತವೆ. ಜೊತೆಗೆ, ಅವುಗಳ ನಿರ್ಮಾಣ ಶೈಲಿಯು ಕೇರಳದ ಮೆಗಾಲಿಥಿಕ್ ಸಮಾಧಿಗಳಿಗೆ ಹೆಚ್ಚು ಹೋಲುತ್ತವೆ.

ಮೆಗಾಲಿಥಿಕ್ ಎಂದರೆ ದೊಡ್ಡ ಕಲ್ಲುಗಳಿಂದ ಮಾಡಿದ ಅಥವಾ ಕಲ್ಲು ಹೊಂದಿರುವ ಇತಿಹಾಸಪೂರ್ವ ಸ್ಮಾರಕಗಳಿಗೆ ಸಂಬಂಧಿಸಿದ ದೊಡ್ಡ ಕಲ್ಲುಗಳಿಂದ ಅಥವಾ ಬೃಹತ್ ಏಕಶಿಲೆಯಲ್ಲಿ ನಿರ್ಮಾಣವಾಗಿರುವ ನಿರ್ಮಾಣಗಳಿಗೆ ಮೆಗಾಲಿಥಿಕ್ ಅಥವಾ ಬೃಹತ್ ಶೀಲಾಯುಗ ಎನ್ನಲಾಗುತ್ತದೆ. ಆದರೆ ಕೇರಳದ ಸಮಾಧಿಗಳ ಸಾಮಾನ್ಯ ಲಕ್ಷಣವಾಗಿರುವ ಮೇಲ್ಭಾಗದ ತೆರೆಯುವಿಕೆಯೊಂದಿಗೆ ಪಾರ್ಶ್ವ ತೆರೆಯುವಿಕೆ ಮತ್ತು ಭೂಗತ ಮಾರ್ಗವನ್ನು ಇಲ್ಲಿ ಪತ್ತೆಹಚ್ಚಲಾಗಿಲ್ಲ. ಇವು ಹೆಚ್ಚಿನ ಸಂಶೋಧನೆಯ ನಂತರ ಮಾತ್ರ ಗೊತ್ತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೆಂಪು ಮಡಿಕೆಗಳ ಮೇಲ್ಮೈಯಲ್ಲಿ ಕಂಡು ಬರುವ ಸಿಪ್ಪೆಯ ಸಣ್ಣ ಕಣಗಳು, ಬಹುಶಃ ರಾಗಿಯ ಕಣಗಳಂತೆ ಎಚ್ಚರಿಕೆಯಿಂದ ಸಂಗ್ರಹಿಸಲಾಗಿದೆ ಮತ್ತು ಹೆಚ್ಚಿನ ಅಧ್ಯಯನಕ್ಕಾಗಿ ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಮುರುಗೇಶಿ ಹೇಳಿದರು.

ಸುಮಾರು 10 ಇಂಚು ಎತ್ತರದ ಒಂದು ಕಾಲಿನ ಕೆಂಪು ಜಾರ್, ಇವುಗಳ ಎತ್ತರ ಕ್ರಮವಾಗಿ ಸುಮಾರು 7.5 ಇಂಚು ವ್ಯಾಸದ ದೊಡ್ಡ ಕೆಂಪು ಮುಚ್ಚಳ, 8.5 ಇಂಚು ವ್ಯಾಸದ ಮತ್ತೊಂದು ದೊಡ್ಡ ಕಪ್ಪು ಮುಚ್ಚಳ, 19 ಸೆಂ, 22 ಸೆಂ ಮತ್ತು 23.5 ಸೆಂ.ಮೀ ಮೂರು ಕೆಂಪು ಮಡಿಕೆಗಳು, 9 ಸೆಂ.ಮೀ ಎತ್ತರದ ಒಂದು ಸಣ್ಣ ಕಪ್ಪು ಮಡಕೆ, 2 ಸೆಂ.ಮೀ ಸಣ್ಣ ಬಾಯಿ, ಒಂದು ಸಣ್ಣ ಕೆಂಪು ಮುಚ್ಚಳ, ಮತ್ತು ಕಪ್ಪು ಮತ್ತು ಕೆಂಪು ಬಟ್ಟಲು ಚಪ್ಪಟೆ ತಳವಿರುವ, ಕೆಂಪು ಮತ್ತು ಕಪ್ಪು ಬಣ್ಣದ ದೀಪಗಳನ್ನು ಕಲ್ಲೆಂಬಿಯಲ್ಲಿ ಸಂಗ್ರಹಿಸಲಾಗಿತ್ತು ಎಂದು ಅವರು ಹೇಳಿದ್ದಾರೆ.
ಕೃಷಿಯ ಉದ್ದೇಶಕ್ಕಾಗಿ ಭೂಮಿಯನ್ನು ಸಮತಟ್ಟು ಮಾಡುವಾಗ ಆಕಸ್ಮಿಕವಾಗಿ ಇಲ್ಲಿ ಗುಹೆ ಪತ್ತೆಯಾಗಿತ್ತು. ಈ ಜಾಗವು ಚಿಕ್ಕ ಬೆಟ್ಟದ ಇಳಿಜಾರಿನಲ್ಲಿದೆ ಮತ್ತು ಕುಮಾರಧಾರಾ ನದಿಯ ಒಳಹರಿವು ನೀರಿರುವ ಸ್ಥಳವಾಗಿದೆ. ಇದು ಕಡಬ ತಾಲೂಕಿನ ಎಡಮಂಗಲದಿಂದ ಸುಮಾರು 16 ಕಿ.ಮೀ ದೂರದಲ್ಲಿದೆ. ಈ ಗುಹೆಯನ್ನು ಪೂರ್ವ ಭಾಗದಲ್ಲಿ ಅಗೆಯುವ ಮೂಲಕ ತೆರೆಯಲಾಯಿತು.
ಇದು ಮಧ್ಯ ಒಂದು ಸ್ತಂಭವನ್ನು ಹೊಂದಿರುವ ಅರ್ಧಗೋಳದ ಗುಮ್ಮಟದಂತೆ ಕಾಣುತ್ತದೆ. ಗುಹೆಯ ಒಳ ಮೇಲ್ಮೈಯಲ್ಲಿ ಕುಂಬಾರಿಕೆಯ ತಳಹದಿಯ ಗುರುತುಗಳು ಗೋಚರಿಸುತ್ತವೆ. ಕಂಬದ ಎರಡೂ ಬದಿಯಲ್ಲಿ ಮಣ್ಣಿನ ರಾಶಿಗಳು ಕಂಡು ಬಂದಿದೆ. ಶಿಲಾಖಂಡರಾಶಿಗಳನ್ನು ತೆರವುಗೊಳಿಸದೇ ಸರಿಯಾದ ಅಧ್ಯಯನ ಇಲ್ಲಿ ಕಷ್ಟಕರವಾಗಿದ್ದು, ಪರೀಕ್ಷೆಯನ್ನು ಮುಂದುವರಿಸಲು ಆ ಸಮಯದಲ್ಲಿ ಮಳೆಯೂ ಅಡ್ಡಿಯಾಗಿತ್ತು. ಗುಹೆಯೊಳಗೆ ಲೋಹಗಳ ಯಾವುದೇ ಕುರುಹುಗಳು ಪತ್ತೆಯಾಗಿರಲಿಲ್ಲ.
ಈ ಜಾಗದ ಮಾಲೀಕ ವಿಶ್ವನಾಥ ಗೌಡ ಬಳ್ಳಡ್ಕ ಅವರ ಪ್ರಕಾರ, ಗುಹೆಯು ಆಗಸ್ಟ್ 19, 2022 ರಂದು ಮಧ್ಯಾಹ್ನ ಪತ್ತೆಯಾಗಿದೆ. ಸ್ಥಳೀಯ ಗ್ರಾಮ ಲೆಕ್ಕಿಗರ ಸಮ್ಮುಖದಲ್ಲಿ ಜಾಗದ ಪಂಚನಾಮೆ ನಡೆಸಿ ಇಲ್ಲಿಂದ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಈ ಸಮಯದಲ್ಲಿ ಪ್ರೋ.ಮುರುಗೇಶಿ ನೇತೃತ್ವದ ಅಧ್ಯಯನ ತಂಡವು ಆಗಸ್ಟ್ 20ರ ಸಂಜೆ ಗುಹೆ ಪತ್ತೆಯಾದ ಬಗ್ಗೆ ಮಾಹಿತಿ ಪಡೆದು ಆಗಸ್ಟ್ 21 ರಂದು ಈ ಸ್ಥಳಕ್ಕೆ ತಲುಪಿತ್ತು.
ತುಳುನಾಡಿನ ಅವಳಿ ವೀರರಾದ ಕೋಟಿ ಮತ್ತು ಚೆನ್ನಯ ಮತ್ತು ಅವರ ಸಹೋದರಿ ಕಿನ್ನಿದಾರು ಅವರಿಗೆ ಸೇರಿದ ಕಲ್ಲೇಂಬಿಯ ಪಕ್ಕದ ಪ್ರದೇಶಗಳಾದ ಸುಳ್ಯದ ದೋಲ, ಎನ್ಮಕಜೆ ಮತ್ತು ಇತರ ಪ್ರದೇಶಗಳು ತುಳು ಜಾನಪದದಲ್ಲೂ ಪ್ರಸಿದ್ಧವಾಗಿದೆ.
ಇದನ್ನೂ ಓದಿ: ಕೋಟೆನಾಡಲ್ಲಿದೆ ರಹಸ್ಯ ಗುಹೆ!