ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಉಪಕಾರಾಗೃಹಕ್ಕೆ ಸೋಮವಾರ ತಡರಾತ್ರಿ ಸೇರಿದ್ದ ವಿಚಾರಣಾಧೀನ ಕೈದಿವೋರ್ವ ಮಂಗಳವಾರ ಮಧ್ಯಾಹ್ನ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದಾನೆ.
ಬೆಳ್ತಂಗಡಿಯ ಹೆಚ್.ಎಂ. ರಾಜು (24) ಮೃತಪಟ್ಟಿರುವ ಕೈದಿ. ರಾಜು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹಾಗಾಗಿ ವಾರಂಟ್ ಮೇಲೆ ಬಂಧಿಸಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿತ್ತು. ಎಲ್ಲ ಪ್ರಕ್ರಿಯೆ ಮುಗಿಯುವಾಗ ಸೋಮವಾರ ಬೆಳಗಿನ ಜಾವ 3:30 ಆಗಿತ್ತು.
ರಾಜು ಬೆಳಗ್ಗೆ ಕಾರಾಗೃಹದಲ್ಲಿ ಆಹಾರ ಸೇವಿಸಿದ್ದು, ಆ ಬಳಿಕ ತನಗೆ ಹುಷಾರಿಲ್ಲ ಎಂದು ಸಹ ಕೈದಿಗಳೊಂದಿಗೆ ಹೇಳಿಕೊಂಡಿದ್ದ ಎನ್ನಲಾಗ್ತಿದೆ. ಆದ್ರೆ ಮಧ್ಯಾಹ್ನದ ವೇಳೆಗೆ ತೀವ್ರ ಅನಾರೋಗ್ಯದಿಂದ ಕುಸಿದು ಬಿದ್ದಿದ್ದ. ತಕ್ಷಣ ಆತನನ್ನು ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಪರೀಕ್ಷಿಸಿದಾಗ ಕೈದಿ ಮೃತಪಟ್ಟಿರುವುದು ದೃಢಪಟ್ಟಿದೆ.
ರಾಜಯ ಕಾರಾಗೃಹಕ್ಕೆ ಬರುವ ಮೊದಲೇ ಅನಾರೋಗ್ಯದಿಂದ ಬಳಲುತ್ತಿದ್ದ ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.