ಚಿತ್ರದುರ್ಗ : ಪತ್ನಿಯನ್ನು ಪತಿ ಕೊಲೆಗೈದು ಬಳಿಕ ಬಚ್ಚಲು ಮನೆಯಲ್ಲಿ ಹೂತಿಟ್ಟು ನಂತರ ಪೊಲೀಸ್ ಠಾಣೆಗೆ ಹೋಗಿ ನನ್ನ ಹೆಂಡತಿಯನ್ನು ಹುಡುಕಿ ಕೊಡಿ ಎಂದು ನಾಟಕವಾಡಿರುವ ಘಟನೆ ಚಿತ್ರದುರ್ಗ ತಾಲೂಕಿನ ಕೋಣನೂರು ಗ್ರಾಮದಲ್ಲಿ ನಡೆದಿದೆ.
ಪತಿ ನಾರಪ್ಪ ಎಂಬಾತ ಪತ್ನಿ ಸುಮಾ(30) ಎಂಬುವರನ್ನು ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಹೂತಿಟ್ಟ ನಂತರ ನನ್ನ ಮಡದಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ದೂರಿನ ಆಧಾರದ ಮೇಲೆ ಪೊಲೀಸರು ಆಕೆಯನ್ನು ಹುಡುಕಲು ಆರಂಭಿಸಿದ್ದಾರೆ. ಆದ್ರೆ, ಆಕೆ ಶವವಾಗಿ ಪತ್ತೆಯಾಗಿದ್ದು, ಆರೋಪಿ ಯಾರೆಂದು ತಿಳಿದ ಪೊಲೀಸರು ಒಂದು ಕ್ಷಣ ಶಾಕ್ ಆಗಿದ್ದಾರೆ.
ಸುಮಾ ತವರು ಮನೆಯವರು ಬಡವರಾಗಿದ್ದ ಕಾರಣ ಆಕೆಗೆ ಸಣ್ಣ ವಯಸ್ಸಿನಲ್ಲೇ ನಾರಪ್ಪ ಎಂಬುವನ ಜೊತೆ ಮದುವೆ ಮಾಡಿದ್ದರು. ಅವರ ದಾಂಪತ್ಯ ಜೀವನಕ್ಕೆ 4 ವರ್ಷದ ಮುದ್ದಾದ ಗಂಡು ಮಗುವೇ ಸಾಕ್ಷಿ. ಡಿಸೆಂಬರ್ 25ರಂದು ಅವರ 6ನೇ ವರ್ಷದ ವಿವಾಹ ವಾರ್ಷಿಕೋತ್ಸವವಿದೆ.
ಇದೇ ದಿನ ನಾರಪ್ಪ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಮನೆಯ ಬಚ್ಚಲು ಮನೆಯಲ್ಲಿ ಹೂತಿಟ್ಟು ಸಿಮೆಂಟ್ನಿಂದ ಪ್ಲಾಸ್ಟಿಂಗ್ ಮಾಡಿ ಪತ್ನಿ ಕಾಣೆಯಾಗಿರೋ ನಾಟಕವಾಡಿದ್ದಾನೆ.
ಇದನ್ನೂ ಓದಿ: ಮತ್ತೆ ಹೆಣ್ಣು ಹುಟ್ಟುವ ಭಯದಲ್ಲಿ ಹೆರಿಗೆ ಹಿಂದಿನ ದಿನವೇ ಗರ್ಭಿಣಿ ಆತ್ಮಹತ್ಯೆ: ಹೊಟ್ಟೆಯಲ್ಲಿದ್ದದ್ದು ಗಂಡು ಮಗು
ಕೊಲೆ ಮಾಡಿದ್ದಲ್ಲದೆ ಭರಮಸಾಗರ ಪೊಲೀಸ್ ಠಾಣೆಗೆ ಹೋಗಿ ನನ್ನ ಪತ್ನಿ ಕಾಣೆಯಾಗಿದ್ದಾಳೆ ಹುಡುಕಿಕೊಡಿ ಅಂತಾ ದೂರು ಕೂಡ ಕೊಟ್ಟಿದ್ದಾನೆ. ಆಗ ಪೊಲೀಸರು ಕೋಣನೂರು ಗ್ರಾಮ, ಸಂಬಂಧಿಕರ ಮನೆ, ತವರು ಮನೆ ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ.
ನಾರಪ್ಪನ ನಾಟಕ ನೋಡಿ ಪೊಲೀಸರಿಗೆ ಅನುಮಾನ ಬಂದು ನಾರಪ್ಪನ ಮನೆ ಪರಿಶೀಲಿಸಿದಾಗ ಬಚ್ಚಲು ಮನೆಯಲ್ಲಿ ಶವ ಹೂತಿಟ್ಟಿರೋದು ಬೆಳಕಿಗೆ ಬಂದಿದೆ. ವಿಷಯ ಗೊತ್ತಾಗುತ್ತಿದ್ದಂತೆ ನಾರಪ್ಪ ಪರಾರಿಯಾಗಿದ್ದಾನೆ.
ಮನೆಯಲ್ಲೇ ಶವ ಹೂತಿಟ್ಟಿರೋ ವಿಷಯ ತಿಳಿಯುತ್ತಿದ್ದಂತೆ ಇಡೀ ಗ್ರಾಮದ ಜನ ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕೆ ಎಸ್ಪಿ ಜಿ. ರಾಧಿಕಾ, ಎಸಿ, ತಹಶೀಲ್ದಾರ್, ವಿಧಿ ವಿಜ್ಞಾನ ವಿಭಾಗದ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.