ಬೆಂಗಳೂರು: ಸಂಸದೆ ಶೋಭಾ ಕರಂದ್ಲಾಜೆ ಅವರು ರಾಜರಾಜೇಶ್ವರಿನಗರ ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ ಎಂದು ಕಾಂಗ್ರೆಸ್ ನಾಯಕಿಯರು ಆರೋಪಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್, ಮಾಜಿ ಸಚಿವೆ ಉಮಾಶ್ರೀ, ಶಾಸಕಿ ಸೌಮ್ಯ ರೆಡ್ಡಿ, ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್ ಅವರು ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ತಮ್ಮ ಪತಿ ಡಿಕೆ ರವಿ ಹೆಸರು ಬಳಸಬಾರದು ಎಂದು ಶೋಭಾ ಕರಂದ್ಲಾಜೆ ಹೇಳುವುದು ಎಷ್ಟು ಸರಿ?. ಈಗಾಗಲೇ ಕುಸುಮ ಈ ವಿಚಾರದಲ್ಲಿ ಸ್ಪಷ್ಟೀಕರಣ ನೀಡಿದ್ದರೂ, ಮಾತನಾಡಲು ದೇಶದಲ್ಲಿ ಸಾಕಷ್ಟು ಪ್ರಚಲಿತ ವಿದ್ಯಮಾನಗಳು ಇದ್ದರೂ ಇದೇ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.
ರಾಜಕೀಯಕ್ಕಾಗಿ ಮಾತು: ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ಮಾತನಾಡಿ, ಶೋಭಾ ಬಹಳ ದಿನಗಳ ನಂತರ ಮಾತಾಡಿದ್ದಾರೆ. ಇಡೀ ದೇಶ ಹಥ್ರಾಸ್ ಅತ್ಯಾಚಾರ ವಿಚಾರದ ಬಗ್ಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ರಾಜಕೀಯಕ್ಕಾಗಿ ಇವರು ರಾಜರಾಜೇಶ್ವರಿ ನಗರ ಕಾಂಗ್ರೆಸ್ ಅಭ್ಯರ್ಥಿ ವಿಷಯದಲ್ಲಿ ಆಸಕ್ತರಾಗಿದ್ದಾರೆ. ಅವರ ಮಾತುಗಳು ಮಹಿಳಾ ಕುಲಕ್ಕೆ ಅವಮಾನ. ಉಪ ಚುನಾವಣೆಯಲ್ಲಿ ಕುಸುಮಾಗೆ ಟಿಕೆಟ್ ಕೊಟ್ಟಿರುವುದು ಮಹಿಳೆಯರಿಗೆ ಒಂದು ಹೆಮ್ಮೆ. ಸೋನಿಯಾ ಗಾಂಧಿ ಅಧ್ಯಕ್ಷೆಯಾಗಿರುವ ಈ ಪಕ್ಷದಲ್ಲಿ ಮಹಿಳೆಯರು ಉಪ ಚುನಾವಣೆ ಅಭ್ಯರ್ಥಿಯಾಗುವುದು ಹೆಮ್ಮೆ. ಆದ್ರೆ, ಶೋಭಾ ಅವರು ಸಾವಿನ ರಾಜಕೀಯ ಮಾಡುತ್ತಿದ್ದಾರೆ ಎಂದರು.
ಮಹಿಳಾ ಕುಲಕ್ಕೆ ಅವಮಾನ: ಉಪ ಚುನಾವಣೆಯಲ್ಲಿ ಕುಸುಮಾ ಅವರಿಗೆ ಟಿಕೆಟ್ ಕೊಟ್ಟಿರುವುದು ಮಹಿಳೆಯರಿಗೆ ಒಂದು ಹೆಮ್ಮೆ. ಆದರೆ, ಕುಸುಮಾ ತನ್ನ ಪತಿ ಡಿ.ಕೆ.ರವಿ ಹೆಸರು ಬಳಕೆ ಮಾಡಿಕೊಳ್ಳಬಾರದು ಎಂದು ಹೇಳುವ ಮೂಲಕ ಹೆಣ್ಣು ಕುಲಕ್ಕೆ ಅವಮಾನವಾಗುವ ರೀತಿ ಶೋಭಾ ಕರಂದ್ಲಾಜೆ ಮಾತನಾಡುತ್ತಾರೆ. ಈಗಾಗಲೇ ಕುಸುಮಾ ಅವರು ಡಿ.ಕೆ.ರವಿ ಹೆಸರು ಬಳಕೆ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಗಂಡ ಸತ್ತ ನಂತರ ಮಹಿಳೆ ಸಮಾಜದಲ್ಲಿ ಮುಂಚೂಣಿಗೆ ಬರಬಾರದಾ ? ಮನೆಯಲ್ಲಿಯೇ ಇರಬೇಕಾ? ಬಿಜೆಪಿಯ ಮನುಸಂಸ್ಕೃತಿಯ ಮನಸ್ಥಿತಿ ಶೋಭಾ ತೋರಿಸಿದ್ದಾರೆ. ಇದನ್ನು ರಾಜರಾಜೇಶ್ವರಿ ನಗರ ಮಹಿಳೆಯರು ಗಂಭೀರವಾಗಿ ಪರಿಗಣಿಸಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ನಾವೇನು ಕೆಲಸ ಮಾಡುವುದಿಲ್ಲವೇ?: ಜಯನಗರ ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ, ಶೋಭಾ ಕರಂದ್ಲಾಜೆ ಒಬ್ಬ ಮಹಿಳೆಯಾಗಿ ಮತ್ತೊಬ್ಬ ಮಹಿಳೆಯ ಬಗ್ಗೆ ಈ ರೀತಿ ಮಾತನಾಡುವುದು ಕೇಳಿ ಬೇಸರವಾಗಿದೆ. ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಬೇಕು ಎನ್ನುವ ಬೇಡಿಕೆ ಸಂಸತ್ತಿನಲ್ಲಿ ಇದೆ. ವಿಧಾನಸಭೆಯಲ್ಲಿ ನಾವು ಕೇವಲ ಶೇ.4 ರಷ್ಟಿದ್ದೇವೆ. ನಮಗೇನು ಅರ್ಹತೆ ಇಲ್ಲವೇ? ನಾವೇನು ಕೆಲಸ ಮಾಡುವುದಿಲ್ಲವಾ? ಎಂದು ಪ್ರಶ್ನಿಸಿದರು.
ಸಂಸತ್ತಿನಲ್ಲಿ ಶೋಭಾ ನಮ್ಮ ರಾಜ್ಯದ ಒಂದೇ ಒಂದು ವಿಷಯದ ಕುರಿತು ಮಾತನಾಡಿದ್ದಾರಾ? ನಿರ್ಭಯಾ ಫಂಡ್ ಬಗ್ಗೆ ಶೋಭಾ ಧ್ವನಿಯೆತ್ತಿದ್ದಾರೆ. ಆದರೆ, ಒಬ್ಬ ಮಹಿಳೆಗೆ ಅವಕಾಶ ಸಿಕ್ಕಿದೆ ಎನ್ನುವುದರ ಬಗ್ಗೆ ಒಳ್ಳೆಯ ಮಾತನಾಡುವ ಬದಲು ಕೀಳು ಮನಸ್ಥಿತಿಯನ್ನು ವ್ಯಕ್ತಪಡಿಸಿದ್ದು ವಿಷಾದನೀಯ ಎಂದರು.
ಶವದ ಮೇಲಿನ ರಾಜಕೀಯ ಬಿಡಿ: ಎಐಸಿಸಿ ವಕ್ತಾರೆ ಐಶ್ವರ್ಯ ಮಹದೇವ್ ಮಾತನಾಡಿ, ಹೆಣ್ಣು ಮಕ್ಕಳು ರಾಜಕೀಯಕ್ಕೆ ಬರುವುದು ಅಪರೂಪ. ಯಾವುದೇ ಪಕ್ಷದಿಂದ ಬಂದರೂ ಉತ್ತಮವೇ. ಕುಸುಮಾ ರಾಜಕೀಯ ಅನಿವಾರ್ಯತೆ ಇರಲಿಲ್ಲ. 31 ವರ್ಷಕ್ಕೆ ಪತಿ ಕಳೆದುಕೊಂಡವರು. ನಾನು ಸಮಾಜ ಸೇವೆ ಮಾಡಬೇಕೆಂದು ಮುಂದೆ ಬಂದಿದ್ದಾರೆ. ಅಂಥವರ ಬಗ್ಗೆ ಶೋಭಾ ಅವಹೇಳನ ಮಾಡುವುದು ಸರಿಯೇ? ಉನ್ನಾವ್ ಕೇಸ್ ಬಗ್ಗೆ ನೀವು ಯಾಕೆ ಮಾತನಾಡಲಿಲ್ಲ? ಹಥ್ರಾಸ್ ಕುರಿತು ಯಾಕೆ ಬಾಯಿ ತೆರೆಯಲಿಲ್ಲ? ಭೇಟಿ ಬಚಾವ್, ಭೇಟಿ ಪಡಾವೋ ಅಂತ ಹೇಳ್ತೀರಾ... ಹೆಣ್ಣು ಮಗಳ ಮೇಲೆ ಯಾಕೆ ಇಂತಹ ಹೇಳಿಕೆ ಕೊಡ್ತೀರಾ? ಎಂದ ಅವರು, ಶವದ ಮೇಲೆ ರಾಜಕೀಯ ಮಾಡುವುದನ್ನು ಬಿಡಿ ಎಂದು ಛೇಡಿಸಿದರು.