ಗೌರಿಬಿದನೂರು (ಚಿಕ್ಕಬಳ್ಳಾಪುರ): ಸೊಂಟಕ್ಕೆ ಕಲ್ಲು ಕಟ್ಟಿ ಕುಂಟೆಗೆ ಬಿಸಾಡಿ ಮಹಿಳೆಯನ್ನು ಕೊಲೆ ಮಾಡಿರುವ ಘಟನೆ ತಾಲೂಕಿನ ಹುಲಿಕುಂಟೆ ಗ್ರಾಮದಲ್ಲಿ ಬೆಳೆಕಿಗೆ ಬಂದಿದೆ. ಗ್ರಾಮದ ಹೊರವಲಯದಲ್ಲಿರುವ ಕುಂಟೆಯಲ್ಲಿ ಸುಮಾರು 30 ವರ್ಷದ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ದುಷ್ಕರ್ಮಿಗಳು ಕೊಲೆ ಮಾಡಿ, ಸೊಂಟಕ್ಕೆ ಸುಮಾರು ಇಪ್ಪತ್ತು ಕೆಜಿ ಕಲ್ಲನ್ನು ಹಗ್ಗದಿಂದ ಕಟ್ಟಿ ಕುಂಟೆಯಲ್ಲಿ ಬಿಸಾಡಿ ಹೋಗಿದ್ದಾರೆ. ಗುರುವಾರ ಸುರಿದ ಭಾರಿ ಮಳೆಯಿಂದ ರಭಸವಾಗಿ ಬಂದ ನೀರಿನ ಹೊಡೆತಕ್ಕೆ ಶವ ತೇಲಿ ಹೊರ ಬಂದಿದ್ದು, ಗ್ರಾಮಸ್ಥರ ಕಣ್ಣಿಗೆ ಕಾಣಿಸಿಕೊಂಡಿದೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದು, ಸ್ಥಳಕ್ಕೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಮೋಹನ್ ಕುಮಾರ್ ಹಾಗೂ ಸಿಪಿಐ ರವಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಂತಕರ ಹಾಗೂ ಮಹಿಳೆಯ ಗುರುತನ್ನು ಪತ್ತೆ ಹಚ್ಚಲು ವಿಶೇಷ ತಂಡವನ್ನು ರಚಿಸಿದ್ದಾರೆ.