ಚಿಕ್ಕಬಳ್ಳಾಪುರ: ಜಿಲ್ಲೆಯ ಗುಡಿಬಡೆ ತಾಲೂಕಿನ ಎಲ್ಲೋಡು ಗ್ರಾಮದಲ್ಲಿ ಗ್ರಾಮವಿಕಾಸ ಯೋಜನೆಯಡಿಯಲ್ಲಿ ಹಮ್ಮಿಕೊಂಡಿದ್ದ ಒಂದು ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಸುಬ್ಬಾರೆಡ್ಡಿ ಗುದ್ದಲಿ ಪೂಜೆ ನೇರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, ನಾನು ಈ ಕ್ಷೇತ್ರದಲ್ಲಿ ಶಾಸಕನಾಗಿ 6 ವರ್ಷಗಳನ್ನು ಪೂರೈಸಿದ್ದು, ಶಾಸಕನಾದ ಮೇಲೆ ಕ್ಷೇತ್ರದಲ್ಲಿ ಸುಮಾರು 800 ಕೋಟಿಗೂ ಅಧಿಕ ವೆಚ್ಚದ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಂಡಿದ್ದೇನೆ. ಅದರಲ್ಲೂ ಗುಡಿಬಂಡೆ ತಾಲೂಕಿನ ಅಭಿವೃದ್ದಿಗೆ ಹೆಚ್ಚಿನ ಅನುದಾನವನ್ನು ತಂದಿದ್ದು, ಮುಂದೆ ಕೂಡ ಇನ್ನೂ ಹೆಚ್ಚಿನ ಅನುದಾನ ತರಲು ಸಿದ್ದನಾಗಿದ್ದು, ಪಕ್ಷಾತೀತವಾಗಿ ಎಲ್ಲರು ಕೈಜೋಡಿಸಿ. ದೀನ ದಲಿತ, ದುರ್ಬಲ ವರ್ಗಗಳ ಏಳಿಗೆಗಾಗಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳು, ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ಜನರಿಗೆ ಪರಿಚಯಿಸುವ ಕಾರ್ಯ ಮೊದಲು ಮಾಡಬೆಕು ಎಂದರು.
ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆ ಅಭಿವೃದ್ದಿಗೆ 6 ಕೋಟಿ, ತಾಲೂಕಿನ ಪೋಲಂಪಲ್ಲಿ ಹಾಗೂ ಗುಡಿಬಂಡೆ ಬಾಗೇಪಲ್ಲಿ ರಸ್ತೆಗೆ ತಲಾ 26 ಕೋಟಿ, ಪಟ್ಟಣದಲ್ಲಿ ಎರಡು ವಸತಿ ನಿಲಯಗಳ ನಿರ್ಮಾಣಕ್ಕೆ 4 ಕೋಟಿ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ ಹಾಗೂ ಐ.ಟಿ.ಐ ಕಾಲೆಜು ಕಟ್ಟಡ ಸ್ಥಾಪನೆಗೆ ತಲಾ 6 ಮತ್ತು 2 ಕೋಟಿ, ಎಲ್ಲೋಡು ಮಾರ್ಗದ ರಸ್ತೆಯ ಅಭಿವೃದ್ದಿಗೆ 1.5 ಕೋಟಿ, ಮಾಚಹಳ್ಳಿ ಗ್ರಾಮದಿಂದ ಗರುಡಾಚಾರ್ಲಹಳ್ಳಿ ಗ್ರಾಮದವರೆಗೆ ರಸ್ತೆ ಅಭಿವೃದ್ದಿಗೆ 12 ಲಕ್ಷ ರೂಪಾಯಿಗಳು, ಬ್ರಾಹ್ಮಣರಹಳ್ಳಿ, ಯರ್ರಹಳ್ಳಿ, ನಿಚ್ಚನಬಂಡಹಳ್ಳಿ ಗ್ರಾಮದಲ್ಲಿ ಸುಮಾರು 60 ಲಕ್ಷ ರೂ. ವೆಚ್ಚದ ಜಿ.ಎಲ್.ಎಸ್ ನೀರಿನ ಟ್ಯಾಂಕ್ ಸೇರಿದಂತೆ ನೂರಾರು ಕೋಟಿ ರೂ. ವೆಚ್ಚದ ಕಮಾಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.