ಕೊಳ್ಳೇಗಾಲ: ಕೋವಿಡ್ ಪ್ರಕರಣ ಹೆಚ್ಚಿರುವ ತಾಲೂಕು ಹಾಗೂ ಗ್ರಾಮಗಳನ್ನು ಗುರುತಿಸಿ, ಹಾಟ್ ಸ್ಪಾಟ್ ಎಂದು ವರ್ಗೀಕರಿಸಿ ಜನರಿಗೆ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ಗೆ ಒಳಪಡಿಸುತ್ತಿದ್ದೇವೆ. ಪಾಸಿಟಿವ್ ಬಂದವರನ್ನೂ ತಕ್ಷಣ ಆಸ್ಪತ್ರೆಗೆ ರವಾನಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿ ತಿಳಿಸಿದರು.
ನಗರದ ಸರ್ಕಾರಿ ಉಪವಿಭಾಗದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು. ಕೊರೊನಾ ಹರಡುವಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ರ್ಯಾಪಿಡ್ ಆಂಟಿಜನ್ ಟೆಸ್ಟ್ ಪ್ರಯೋಗ ಮಾಡುತ್ತಿದ್ದು, ಹಾಟ್ ಸ್ಪಾಟ್ಗಳಾಗಿರುವ ಊರುಗಳಲ್ಲಿ ಈ ಪ್ರಕ್ರಿಯೆ ನಡೆಯುತ್ತಿದೆ. ಪರಿಣಾಮ ತ್ವರಿತ ಕೋವಿಡ್ ಫಲಿತಾಂಶ ಪಡೆದು ಕ್ರಮ ವಹಿಸುತ್ತಿದ್ದೇವೆ ಎಂದರು. ಇನ್ನೂ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಮನೆ-ಮನೆ ಸರ್ವೆ ನಡೆಸುತ್ತಿದ್ದೇವೆ. 19 ಸಾವಿರ ಮನೆಗಳಿಗೆ ತಲುಪಿದ್ದೇವೆ. ಶೀತ, ಕೆಮ್ಮು, ನೆಗಡಿ, ಜ್ವರ ಇಂತಹ ಲಕ್ಷಣಗಳಿದ್ದರೆ ಐಸೋಲೇಟ್ ಮಾಡುವ ಮೂಲಕ ತಪಾಸಣೆಗೆ ಒಳಪಡಿಸುತ್ತಿದ್ದೇವೆ ಎಂದ್ರು.
ಸ್ವಾಬ್ ಟೆಸ್ಟ್ನಲ್ಲಿ ಕೋವಿಡ್ ಲಕ್ಷಣಗಳು ಕಂಡು ಬಂದಿರುವವವರಿಗೆ ಮೂರು ದಿನಕ್ಕೆ ಆಗುವಷ್ಟು ಅಗತ್ಯ ಔಷಧ ನೀಡಲಾಗುತ್ತಿದೆ. ಪಾಸಿಟಿವ್ ಬರುವ ಮುನ್ನವೆ ಆರಂಭದಲ್ಲೇ ಕೋವಿಡ್ಗೆ ಚಿಕಿತ್ಸೆ ನೀಡಲು ಮುಂದಾಗುತ್ತಿದ್ದೇವೆ. ಇಂತಹ ಕ್ರಮಗಳಿಂದ ಕೋವಿಡ್ ಇತ್ತೀಚಿನ ದಿನದಲ್ಲಿ ಸ್ಥಿರತೆ ಕಂಡುಕೊಂಡಿದೆ ಎಂದರು.
ಎಂ.ಸಿ.ಹೆಚ್ ಆಸ್ಪತ್ರೆಗೆ 24 ಕಾನ್ಸಂಟ್ರೇಟರ್ ವ್ಯವಸ್ಥೆ ಇದೆ:
ಕೊರೊನಾ ಚಿಕಿತ್ಸೆಗೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ. ಸದ್ಯ 24 ಹಾಸಿಗೆಗೆ ಕಾನ್ಸಂಟ್ರೇಟರ್ ಹಾಕಲಾಗಿದೆ. ಟ್ರಯಾಜ್ ಮಾಡುವಾಗಲೇ ಸೋಂಕಿತನಿಗೆ ಪ್ರಾಣವಾಯು ಅಗತ್ಯವಿದ್ದರೆ ತಕ್ಷಣ ಒದಗಿಸುವ ಕೆಲಸ ಮಾಡಲಾಗುತ್ತದೆ ಜಿಲ್ಲಾಧಿಕಾರಿ ತಿಳಿಸಿದರು.
ಮೊರಾರ್ಜಿ ಶಾಲೆಯಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುತ್ತದೆ:
125 ಹಾಸಿಗೆ ವುಳ್ಳ ಕಿತ್ತೂರು ರಾಣೆ ಚೆನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ ಭರ್ತಿ ಆಗುತ್ತಿರುವುದು ಕಂಡು ಬಂದಿದೆ. ಹೀಗಾಗಿ ಪಕ್ಕದಲ್ಲಿರುವ ಮೊರಾರ್ಜಿ ಶಾಲೆಯಲ್ಲೂ ಕೋವಿಡ್ ಕೇರ್ ಸೆಂಟರ್ ತೆರೆಯಲು ಸಿದ್ಧತೆಗಳನ್ನು ಮಾಡಲಾಗುತ್ತಿದ್ದು, ಇನ್ನೆರಡು ದಿನದಲ್ಲಿ ಸೆಂಟರ್ ಕಾರ್ಯನಿರ್ವಹಿಸಲಿದೆ ಎಂದರು.