ಕೊಳ್ಳೇಗಾಲ: ತಾಲೂಕಿನ ಐದು ಎಸ್ಎಸ್ಎಲ್ಸಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ಎನ್.ಮಹೇಶ್, ಅಧಿಕಾರಿಗಳಿಗೆ ಪರೀಕ್ಷೆ ನಡೆಸುವ ಬಗ್ಗೆ ನಿರ್ದೇಶನ ನೀಡಿದರು.
![MLA N. Mahesh](https://etvbharatimages.akamaized.net/etvbharat/prod-images/kn-cnr-kollegal-shashakabeti-av-avb-kac10017_11062020160531_1106f_1591871731_668.jpg)
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಜಿಲ್ಲೆಯಲ್ಲಿ ಒಟ್ಟು 11,300 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಈ ಪೈಕಿ ಕೊಳ್ಳೇಗಾಲ ವಿಧಾನಕ್ಷೇತ್ರದಲ್ಲಿ 3,3556 ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ. ಕೋವಿಡ್-19 ಭೀತಿ ಇರುವುದರಿಂದ ಬಹಳ ಸೂಕ್ಷ್ಮವಾಗಿ ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದ್ದೇನೆ.
ಕೋವಿಡ್ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ಕುರಿತು ಶಿಕ್ಷಣ ಸಚಿವರು, ಪರೀಕ್ಷೆ ಯಶಸ್ವಿಯಾಗಿ ನಡೆಸಲು ರಾಜ್ಯದ ಎಲ್ಲಾ ಶಾಸಕರಿಗೆ ಪತ್ರದ ಮೂಲಕ ತಿಳಿಸಿದ್ದಾರೆ.
ಈ ಹಿನ್ನೆಲೆ ಸಂಬಂಧಪಟ್ಟ ಇಲಾಖೆಗೆ ನಾನು ಪತ್ರ ಬರೆದಿದ್ದೇನೆ. ಮಕ್ಕಳ ಭವಿಷ್ಯದಲ್ಲಿ ಈ ಪರೀಕ್ಷೆ ಮುಖ್ಯವಾಗಿದೆ. ಇದರ ಜೊತೆಗೆ ಸುರಕ್ಷತೆ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ ಶುಚಿತ್ವ ಹಾಗೂ ಸಾನಿಟೈಸ್ ಮಾಡಬೇಕು. ಕೊಠಡಿಗಳಲ್ಲಿ ಸ್ವಲ್ಪವೂ ಕಸ, ಧೂಳು ಇರದಂತೆ ನೋಡಿಕೊಳ್ಳಬೇಕು. ಒಂದು ಕೊಠಡಿಯಲ್ಲಿ 18-20 ಮಕ್ಕಳಿಗೆ ಮಾತ್ರ ಅವಕಾಶ ನೀಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೆಮ್ಮು, ಜ್ವರ ಲಕ್ಷಣಳಿದ್ದರೆ ಅಂತಹ ಮಕ್ಕಳನ್ನು ಪ್ರತ್ಯೇಕ ರೂಂನಲ್ಲಿ ಪರೀಕ್ಷೆ ಬರೆಸಬೇಕು ಎಂದು ತಿಳಿಸಿದ್ದೇನೆ.
ವಿವಿಧ ಗ್ರಾಮಗಳಿಂದ ಬರುವ ಮಕ್ಕಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಕೆಎಸ್ಆರ್ಟಿಸಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ನಗರಸಭೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆಗಳು ಪರೀಕ್ಷಾ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸುವಂತೆ ಸೂಚನೆ ನೀಡಿದ್ದೇನೆ ಎಂದರು.