ಚಾಮರಾಜನಗರ: ಕೇಂದ್ರ ಲೋಕಸೇವಾ ಆಯೋಗ (UPSC)ದ ಪರೀಕ್ಷೆಯಲ್ಲಿ 601 ರ್ಯಾಂಕ್ ಗಳಿಸುವ ಮೂಲಕ ಜಿಲ್ಲೆಯ ಯುವಕರೊಬ್ಬರು ಕೀರ್ತಿ ತಂದಿದ್ದಾರೆ.
ಎಂಜಿನಿಯರಿಂಗ್(ಮೆಕ್ಯಾನಿಕಲ್) ಪದವೀಧರರಾದ 27 ವರ್ಷದ ಪ್ರಮೋದ್ ಆರಾಧ್ಯ, ಗುಂಡ್ಲುಪೇಟೆ ತಾಲೂಕಿನ ಹಳ್ಳದಮಾದಹಳ್ಳಿಯ ರುದ್ರಾರಾಧ್ಯ ಮತ್ತು ಮಮತಾಮಣಿ ರೈತ ದಂಪತಿಯ ಪುತ್ರ.

ಮೊದಲ ಪ್ರಯತ್ನದಲ್ಲಿ ವಿಫಲರಾಗಿದ್ದ ಪ್ರಮೋದ್, ಎರಡನೇ ಪ್ರಯತ್ನದಲ್ಲಿ ಸಂದರ್ಶನ ಎದುರಿಸಿದ್ದರು. ಕಡಿಮೆ ಅಂಕಗಳ ಅಂತರದಲ್ಲಿ ಅಧಿಕಾರಿಯಾಗುವ ಕನಸು ಕೈತಪ್ಪಿತ್ತು. ಛಲಬಿಡದ ಪ್ರಮೋದ್ ಮೂರನೇ ಪ್ರಯತ್ನದಲ್ಲಿ 601ನೇ ರ್ಯಾಂಕ್ ಪಡೆದು ಯಶಸ್ವಿಯಾಗಿದ್ದಾರೆ.
ಭಾರತೀಯ ನಾಗರಿಕ ಸೇವೆಯ ಪರೀಕ್ಷೆಗೆ ಸಿದ್ಧತೆ ಹಾಗೂ ತರಬೇತಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಾರಿಗೊಳಿಸಿರುವ ವಿದ್ಯಾರ್ಥಿ ವೇತನವನ್ನು ಪಡೆದುಕೊಂಡಿದ್ದ ಪ್ರಮೋದ್ ಅವರು, ದೆಹಲಿಯಲ್ಲಿ ಪರೀಕ್ಷಾ ಪೂರ್ವ ತರಬೇತಿ ಪಡೆದಿದ್ದರು.
ಚಾಮರಾಜನಗರ ಜಿಲ್ಲೆಯಿಂದ ಯುಪಿಎಸ್ಸಿಗೆ ಆಯ್ಕೆಯಾಗಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದು ಪ್ರಮೋದ್ ಆರಾಧ್ಯ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಯುಪಿಎಸ್ಸಿ ಪರೀಕ್ಷೆ ಫಲಿತಾಂಶ: ಬೆಳಗಾವಿಯ ಶಾಕೀರ್ ಅಹ್ಮದ್ಗೆ 583ನೇ ರ್ಯಾಂಕ್