ಚಾಮರಾಜನಗರ: ಅನರ್ಹ ಶಾಸಕರು ಜನರ ಮುಂದೆ ಮತ್ತೊಮ್ಮೆ ಅನರ್ಹರಾಗ್ತಾರೆ ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು.
ಕೊಳ್ಳೇಗಾಲದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಸಿ.ಮಹದೇವಪ್ಪ, ಮತದಾರರು ಪ್ರಜ್ಞಾವಂತರಾಗಿದ್ದು, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಪಕ್ಷಾಂತರಿಗಳಿಗಾದ ಸೋಲೇ ರಾಜ್ಯದಲ್ಲೂ ಮರುಕಳಿಸಲಿದ್ದು ಅನರ್ಹ ಶಾಸಕರೆಲ್ಲರೂ ಸೋಲುತ್ತಾರೆಂದು ಭವಿಷ್ಯ ನುಡಿದರು.
ಪ್ರಜಾಪ್ರಭುತ್ವಕ್ಕೆ ಮಾರಕವಾಗಿ ಬಿಜೆಪಿ ನಡೆದುಕೊಂಡಿದ್ದು, ಈ ಸರ್ಕಾರದ ಆಯಸ್ಸು ಕೆಲವು ತಿಂಗಳಷ್ಟೇ. ಚುನಾವಣೆ ಫಲಿತಾಂಶದ ಬಳಿಕ ಸರ್ಕಾರ ಇರುವುದಿಲ್ಲ, ಕಾಂಗ್ರೆಸ್ ಜೆಡಿಎಸ್ನೊಂದಿಗೆ ಸರ್ಕಾರವನ್ನೂ ಸಹ ರಚಿಸುವುದಿಲ್ಲವೆಂದು ಹೇಳಿದರು.
ಅನರ್ಹ ಶಾಸಕ ಎಚ್.ವಿಶ್ವನಾಥ್ ಸ್ಥಿತಿ ಗೊಂದಲಮಯವಾಗಿದೆ. ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಅವರು ಜೆಡಿಎಸ್ ಶಾಸಕರಾದರು, ರಾಜ್ಯಾಧ್ಯಕ್ಷರಾದರು ಇದೀಗ ಬಿಜೆಪಿ ಸೇರಿದ್ದಾರೆ. ಅವರೇ ಪಕ್ಷಾಂತರಿಗಳ ಬಗ್ಗೆ ಬರೆದು ಅವರೇ ಪಕ್ಷಾಂತರಿಯಾಗಿದ್ದಾರೆ. ಅವರ ಮಾತನ್ನೀಗ ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.