ಚಾಮರಾಜನಗರ: ಹನೂರು ತಾಲೂಕಿನ ಕಾಡುಗಳ್ಳ, ದಂತಚೋರ ವೀರಪ್ಪನ್ನ ಹುಟ್ಟೂರಾದ ಗೋಪಿನಾಥಂನಲ್ಲಿ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರ ಪುತ್ಥಳಿ ಅನಾವರಣಗೊಂಡಿದೆ. ಗೋಪಿನಾಥಂ ಗ್ರಾಮದ ಜನರು ವೀರಪ್ಪನ್ ವಂಚನೆಗೆ ಬಲಿಯಾದ ಅರಣ್ಯಾಧಿಕಾರಿಯ ಪುತ್ಥಳಿ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ.
ಪಿ.ಶ್ರೀನಿವಾಸ್ ಕಟ್ಟಿಸಿದ ದೇಗುಲ: ಇಂದು ಪುತ್ಥಳಿ ಅನಾವರಣಗೊಂಡಿರುವ ಮಾರಿಯಮ್ಮ ದೇವಾಲಯವು ಪಿ.ಶ್ರೀನಿವಾಸ್ ಅವರೇ ಕಟ್ಟಿಸಿದ ದೇಗುಲವಾಗಿದ್ದು ಅವರು ಹುತಾತ್ಮರಾದ ಬಳಿಕ ಇಲ್ಲಿ ಶ್ರೀನಿವಾಸ್ ಅವರಿಗೇ ಮೊದಲ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಚಾಮರಾಜನಗರ ಸಿಸಿಎಫ್ ಆಗಿದ್ದ ಮನೋಜ್ ಕುಮಾರ್, ಗೋಪಿನಾಥಂಗೆ ಭೇಟಿ ನೀಡಿದ ಸಂದರ್ಭ ಗ್ರಾಮದ ಅಭಿವೃದ್ಧಿ ಮತ್ತು ದೇವಾಲಯ ಅಭಿವೃದ್ಧಿಗೆಂದು 2 ಲಕ್ಷ ರೂ. ನೀಡಲು ಬಂದಿದ್ದಾರೆ. ಆಗ ಗ್ರಾಮಸ್ಥರು ನಮಗೆ ಹಣ ಬೇಡ ಡಿಎಫ್ಒ ಪಿ ಶ್ರೀನಿವಾಸ್ ಅವರ ಪುತ್ಥಳಿ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದರು.
ಗ್ರಾಮಸ್ಥರ ಒತ್ತಾಸೆಯಂತೆ ಗೋಪಿನಾಥಂನ ಮಾರಿಯಮ್ಮ ದೇವಾಲಯದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ಪಿ ಶ್ರೀನಿವಾಸ್ ಅವರ ಎರಡು ಅಡಿಯ ಕಂಚಿನ ಪುತ್ಥಳಿಯನ್ನು ಮಾಡಿಸಿಕೊಟ್ಟಿದ್ದಾರೆ. ಇದೀಗ ಮಂಟಪ ನಿರ್ಮಿಸಿ ಪುತ್ತಳಿ ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡಲಾಗಿದೆ.
ಪಿ.ಶ್ರೀನಿವಾಸ್ ಬಗ್ಗೆ ಹೆಚ್ಚಿನ ಮಾಹಿತಿ..: ಮೂಲತಃ ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಾಜಮಂಡ್ರಿಯಲ್ಲಿ 12 ಸೆಪ್ಟೆಂಬರ್ 1954 ರಲ್ಲಿ ಶ್ರೀನಿವಾಸ್ ಜನಿಸಿದ್ದರು. ವೀರಪ್ಪನ್ ಸೆರೆಯ ಸಲುವಾಗಿ ಕಾರ್ಯಾಚರಣೆಗೆ ನೇಮಕಗೊಂಡಿದ್ದರು. ವೀರಪ್ಪನ್ನನ್ನು ಮನವೊಲಿಸಿ ಮುಖ್ಯವಾಹಿನಿಗೆ ಕರೆ ತರುತ್ತೇನೆಂಬ ನಂಬಿಕೆಯಿಂದ ಕಾರ್ಯಾಚರಣೆಯಲ್ಲಿ ದಕ್ಷತೆ ಮೆರೆದಿದ್ದರು.
1980ರಲ್ಲಿ ಬೆಂಗಳೂರಿನಲ್ಲಿ ಸಾರ್ಕ್ ಸಮ್ಮೇಳನ ನಡೆಯುತ್ತಿದ್ದ ಸಂದರ್ಭ ವೀರಪ್ಪನ್ನನ್ನು ಬಂಧಿಸಿದ್ದ ಪೊಲೀಸರು ಆಗ ಅರಣ್ಯಾಧಿಕಾರಿಯಾಗಿದ್ದ ಪಿ ಶ್ರೀನಿವಾಸ್ಗೆ ಒಪ್ಪಿಸಿದ್ದರು. ವೀರಪ್ಪನ್ನನ್ನು ಚಾಮರಾಜನಗರ ತಾಲೂಕಿನ ಬೂದಿಪಡಗ (ರಂಗಸಂದ್ರ) ಗೆಸ್ಟ್ಹೌಸ್ನಲ್ಲಿ ಮೂರು ದಿನ ವಿಚಾರಣೆಗಿಡಲಾಗಿತ್ತು. ಆದರೆ ಅಲ್ಲಿಂದ ವೀರಪ್ಪನ್ ಪರಾರಿಯಾಗಿದ್ದ.
ವೀರಪ್ಪನ್ನ ಹಲವು ಸಹಚರರು ಶರಣಾಗತರಾಗಿದ್ದರು. ಹೀಗೆ ಶರಣಾಗತಿಯ ನಾಟಕವಾಡಿ, 1991 ನ.10 ರಂದು ಎರಕೆಯಂ ಹಳ್ಳದ ಸಮೀಪ ಪಿ ಶ್ರೀನಿವಾಸ್ ಅವರನ್ನು ಬರ್ಬರವಾಗಿ ಕೊಂದು ಹಾಕಿದ್ದ. ಅವರು ವೀರಪ್ಪನ್ ಕ್ರೌರ್ಯಕ್ಕೆ ಸಿಲುಕಿ ಹುತಾತ್ಮರಾಗಿ 31 ವರ್ಷ ಗತಿಸಿದರೂ ಗ್ರಾಮದ ಜನರು ಮಾರಿಯಮ್ಮ ದೇವಾಲಯದಲ್ಲಿ ಶ್ರೀನಿವಾಸರ ಭಾವಚಿತ್ರವಿಟ್ಟು ಪೂಜಿಸುತ್ತಾರೆ.
ಶ್ರೀನಿವಾಸ್ ಜನಪರ ಕಾರ್ಯಗಳೇನು?: ಪಿ.ಶ್ರೀನಿವಾಸ್ ಅವರು ಗೋಪಿನಾಥಂನ ಬಡಜನರಿಗೆ ಸುಮಾರು 40 ಮನೆ ನಿರ್ಮಿಸಿ ಕೊಟ್ಟಿದ್ದರು. ಕಾಡಂಚಿನ ಜನರಿಗೆ ವೈದ್ಯಕೀಯ ಸೇವೆ, ಕುಡಿಯುವ ನೀರು, ರಸ್ತೆ, ಸಾರಿಗೆ ಸಂಪರ್ಕವನ್ನು ಸ್ವಂತ ಹಣದಲ್ಲಿಯೇ ಕಲ್ಪಿಸಿ ಕೊಟ್ಟಿದ್ದರು. ವೀರಪ್ಪನ್ ನೆಲೆಸಿದ್ದ ಕಾಡಿನ ಸುತ್ತಮುತ್ತಲ ಗ್ರಾಮಸ್ಥರಿಗೆ ಅರಣ್ಯದ ಉಪ ಉತ್ಪನ್ನಗಳ ಮಾರಾಟಕ್ಕೆ ಒತ್ತು ನೀಡಿ ಜಾಗೃತಿ ಮೂಡಿಸುವ ಮೂಲಕ ಅರಣ್ಯ ಸಂಪತ್ತು, ವನ್ಯಪ್ರಾಣಿಗಳನ್ನು ಉಳಿಸುವ ಕಾರ್ಯವನ್ನೆಲ್ಲ ಮಾಡಿದ್ದರು. ಸ್ನೇಹಿತರು ಹಾಗೂ ಬಂಧುಗಳಿಂದಲೂ ಹಣ ಸಂಗ್ರಹಿಸಿ ಅನೇಕ ಜನಹಿತ ಸೇವೆಗೆ ವಿನಿಯೋಗಿಸಿದ್ದರು.
ಗೋಪಿನಾಥಂನ ದೇವರು ಈ ಸಾಹೇಬರು: 1992ರಲ್ಲಿ ಶ್ರೀನಿವಾಸರಿಗೆ ಉನ್ನತ ನಾಗರಿಕ ಶೌರ್ಯ ಪ್ರಶಸ್ತಿಯಾದ 'ಕೀರ್ತಿಚಕ್ರ'ವನ್ನು ರಾಷ್ಟ್ರಪತಿಗಳು ಮರಣೋತ್ತರವಾಗಿ ಪ್ರದಾನ ಮಾಡಿದ್ದಾರೆ. 2020 ಸೆ.11 ರಂದು ನಡೆದ ಅರಣ್ಯ ಹುತಾತ್ಮರ ದಿನದಂದು ಎರಕೆಯಂ ಹಳ್ಳದಲ್ಲಿ ಶ್ರೀನಿವಾಸ್ ಅವರ ಸ್ಮಾರಕ ಉದ್ಘಾಟನೆಗೊಂಡಿತ್ತು.
ಶ್ರೀನಿವಾಸ್ ಮಡಿದ ಸ್ಥಳವೂ ಇದೀಗ ಅರಣ್ಯ ಇಲಾಖೆಯ ಪಾಲಿಗೆ ಪುಣ್ಯಭೂಮಿಯಾಗಿದ್ದು ಇಂದಿಗೂ ಪ್ರತಿವರ್ಷ ಗಣ್ಯರಿಂದ ಗೌರವ ನಮನ ಸಲ್ಲಿಸಲಾಗುತ್ತಿದೆ. ಗೋಪಿನಾಥಂ ಮಿಸ್ಟ್ರಿ ಕ್ಯಾಂಪಿನ ಸಭಾಂಗಣಕ್ಕೆ ಅವರ ಹೆಸರಿನ್ನಿಡಲಾಗಿದೆ. ಗೋಪಿನಾಥಂನಲ್ಲಿ ವೀರಪ್ಪನ್ ನೆನಪು ಅಳಿದರೂ ಡಿಸಿಎ ಶ್ರೀನಿವಾಸನ್ ಹೆಸರು ಮಾತ್ರ ಶಾಶ್ವತವಾಗಿ ಉಳಿದಿದೆ.
ಅರಣ್ಯ ಹುತಾತ್ಮರ ದಿನವಾದ ಇಂದು ಪಿ.ಶ್ರೀನಿವಾಸ್ ಅವರ ಪುತ್ತಳಿ ಅನಾವರಣಗೊಂಡಿದ್ದು ಪಿಸಿಸಿಎಫ್ ವಿಜಯಕುಮಾರ್ ಗೊಗೀ, ಹಿರಿಯ ಅರಣ್ಯಾಧಿಕಾರಿಗಳಾದ ಮನೋಜ್ ಕುಮಾರ್, ಉಪೇಂದ್ರಕುಮಾರ್ ಕಾರ್ಯಕ್ರಮದಲ್ಲಿ ಹಾಜರಿದ್ದರು. ಶ್ರೀನಿವಾಸ್ ಅವರನ್ನು ಮಾದರಿಯಾಗಿಟ್ಟುಕೊಂಡು ಕಟ್ಟಿರುವ ಯುವಪಡೆ ಗ್ರೀನ್ ವಾರಿಯರ್ಸ್ ತಂಡ ಕೂಡ ಸಕ್ರಿಯವಾಗಿ ಪಾಲ್ಗೊಂಡಿತ್ತು.
ಇದನ್ನೂ ಓದಿ : ಅಕ್ಟೋಬರ್ 13 ರಿಂದ 27ರವರೆಗೆ ಹಾಸನಾಂಬ ದೇವಿಯ ದರ್ಶನ