ಬೀದರ್: ಮರಾಠ ಸಮುದಾಯಕ್ಕೆ ರಾಜಕೀಯ ಸ್ಥಾನಮಾನ ಸೇರಿದಂತೆ ಸಂವಿಧಾನಬದ್ಧ ಸೌಲಭ್ಯಗಳು ಕೊಡುವಲ್ಲಿ ಬಿಜೆಪಿ ಅಸಹಕಾರ ತೋರಿದೆ ಎಂದು ಆರೋಪಿಸಿ ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಮರಾಠ ಸಮುದಾಯ ಕಾಂಗ್ರೆಸ್ಗೆ ಬೆಂಬಲಿಸಲಿದೆ ಎಂದು ಸಮುದಾಯದ ನಾಯಕ ಹಾಗೂ ಮಾಜಿ ಶಾಸಕ ಎಂ.ಜಿ.ಮುಳೆ ಜಂಟಿ ಸುದ್ದಿಗೊಷ್ಠಿ ನಡೆಸಿ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಮರಾಠ ಸಮುದಾಯಕ್ಕೆ ಟಿಕೆಟ್ ಕೊಟ್ಟು ರಾಜಕೀಯ ಸ್ಥಾನಮಾನ ಕೊಡಬೇಕು ಎಂದು ಬಿಜೆಪಿಗೆ ಆಗ್ರಹಿಸಲಾಗಿತ್ತು. ಆದರೆ ಕೊನೆ ಹಂತದಲ್ಲಿ ಸಂಸದ ಭಗವಂತ ಖೂಬಾ ಜೆಡಿಎಸ್ನಲ್ಲಿದ್ದ ಮಲ್ಲಿಕಾರ್ಜುನ್ ಖೂಬಾ ಅವನ್ನು ಬಿಜೆಪಿಗೆ ಸೆರ್ಪಡೆ ಮಾಡಿಕೊಂಡು ಮರಾಠ ಸಮುದಾಯಕ್ಕೆ ಸಿಗಬೇಕಾದ ಟಿಕೆಟ್ ಅವಕಾಶವನ್ನು ತಪ್ಪಿಸಿದ್ದಾರೆ.
ಹೀಗಾಗಿ ಬಿಜೆಪಿ ಹಾಗೂ ಸಂಸದ ಭಗವಂತ ಖೂಬಾ ಅವರಿಂದ ನಮಗೆ ರಾಜಕೀಯವಾಗಿ ಅನ್ಯಾಯವಾಗಿದೆ. ಅದಕ್ಕಾಗಿ ಅವರ ವಿರುದ್ಧ ಸಮಾಜ ಈ ಚುನಾವಣೆಯಲ್ಲಿ ತೊಡೆ ತಟ್ಟಿ ನಿಂತಿದೆ. ಮರಾಠ ಸಮುದಾಯಕ್ಕೆ 2ಎ ಮಿಸಲಾತಿ ನೀಡಬೇಕು ಎಂದು ಮರಾಠ ಮುಕ್ತಿ ಮೊರ್ಚಾ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ ವೇಳೆ ಅಸಹಕಾರ ತೋರಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಈಶ್ವರ ಖಂಡ್ರೆ ಅವರಿಗೆ ಬೆಂಬಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ, ಸಚಿವ ರಹಿಂಖಾನ್, ಮುಖಂಡರಾದ ಅರುಣ ಪಾಟೀಲಗ ಎಕಂಬೇಕರ, ಅಶೋಕ ಪಾಟೀಲ್, ನಾರಾಯಣರಾವ್, ಬಸವರಾಜ ಜಾಬಶೆಟ್ಟಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.