ಎಲ್ಲೆಂದರಲ್ಲಿ ಸುರಿದಿರುವ ಕಸದ ರಾಶಿ.. ದಟ್ಟವಾಗಿ ಆವರಿಸಿರುವ ಹೊಗೆ.. ಇಂತಹ ದೃಶ್ಯಗಳು ಕಂಡು ಬರುತ್ತಿರುವುದು ಬೀದರ್ ತಾಲೂಕಿನ ಸುಲ್ತಾಪೂರ ಗ್ರಾಮದಲ್ಲಿ.
ನಗರಸಭೆ ಹೊರ ಹಾಕುತ್ತಿರುವ ತ್ಯಾಜ್ಯ ವಿಲೇವಾರಿ ಘಟಕದ ಅವಾಂತರದಿಂದ ಈ ಗ್ರಾಮದ ಯುವಕರಿಗೆ ಕಂಕಣಭಾಗ್ಯವೇ ಇಲ್ಲದಂತಾಗಿದೆ. ತ್ಯಾಜ್ಯಕ್ಕೆ ಬೆಂಕಿ ಹತ್ತಿ ಸದಾ ಗಬ್ಬು ನಾರುವ ಕೆಟ್ಟ ವಾಸನೆ ಇಡೀ ಊರಿಗೆ ಆವರಿಸಿಕೊಳ್ಳುತ್ತೆ. ಹೆಣ್ಣು ಹೆತ್ತವರು ಈ ಗ್ರಾಮಕ್ಕೆ ಕಾಲಿಡುತ್ತಿದ್ದಂತೆ, ಈ ನರಕಕ್ಕೆ ನಮ್ಮ ಮಗಳನ್ನು ಕೊಡುವುದಿಲ್ಲ ಅಂತಾ ವಾಪಸ್ ಹೋಗ್ತಾರಂತೆ. ಹೀಗಾಗಿ ಈ ಗ್ರಾಮದ ಯುವಕರು ಕಂಗಾಲಾಗಿದ್ದಾರೆ.
ಇಲ್ಲಿನ ಅವ್ಯವಸ್ಥೆಗೆ ಅಲ್ಲಿನ ಜನ ರೋಗಗಳಿಗೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದಾರೆ. ಇನ್ನು ಕೆಟ್ಟ ಹೊಗೆಯಿಂದ ಫಲವತ್ತಾದ ಜಮೀನು ಕೂಡ ಬಂಜರು ಭೂಮಿಯಾಗ್ತಿದೆ. 15 ವರ್ಷಗಳಿಂದ ನಗರಸಭೆ ಈ ಗ್ರಾಮಕ್ಕೆ ನರಕದರ್ಶನ ಮಾಡಿಸುತ್ತಿದ್ದು, ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಸ್ವಚ್ಛಭಾರತ ಪಾಠ ಹೇಳುವ ನಗರಸಭೆ ಈ ಗ್ರಾಮವನ್ನ ಶಾಪಗ್ರಸ್ಥವನ್ನಾಗಿ ಮಾಡಿದೆ. ಇಲ್ಲಿನ ಯುವಕರ ಸಂಕಷ್ಟಕ್ಕೆ ಅದ್ಯಾವಾಗ ಮುಕ್ತಿ ಸಿಗುತ್ತೋ ಕಾದು ನೋಡಬೇಕಿದೆ.