ಬೀದರ್: ಭೀಕರ ಬರದಿಂದ ತತ್ತರಿಸಿ ಹೋದ ಗಡಿ ಜಿಲ್ಲೆ ಬೀದರ್ನಲ್ಲಿ ಜನರು ಕುಡಿಯಲು ಹನಿ ನೀರಿಗೆ ಪರದಾಡುತ್ತಿರುವಾಗ ಮೇವಿಲ್ಲದೇ ಜಾನುವಾರುಗಳು ನರಳಾಡಿ ಕೊನೆಯುಸಿರೆಳೆದ ಘಟನೆ ನಡೆದಿದೆ.
ಜಿಲ್ಲೆಯ ಔರಾದ್ ಪಟ್ಟಣದ ಅಮರೇಶ್ವರ ಗೋ ಶಾಲೆಯಲ್ಲಿ ಮೇವಿನ ಅಭಾವ ಹಾಗೂ ನಿರ್ವಹಣೆ ನಿರ್ಲಕ್ಷ್ಯತನದಿಂದ ಮೂಕ ಪ್ರಾಣಿಗಳು ಹಸಿವಿನಿಂದ ಸಾವಿಗಿಡಾಗಿವೆ. ಸುಮಾರು 5ಕ್ಕೂ ಹೆಚ್ಚು ಜಾನುವಾರುಗಳು ಮೇವು, ನೀರಿಲ್ಲದೆ ಸಾವನ್ನಪ್ಪಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 128 ಜಾನುವಾರುಗಳನ್ನ ಹೊಂದಿರುವ ಅಮರೇಶ್ವರ ಗೋ ಶಾಲೆಯಲ್ಲಿ ಈ ಬಾರಿ ಮೇವಿನ ಕೊರತೆ ನಾಲ್ಕು ತಿಂಗಳಿನಿಂದಲೇ ಉಂಟಾಗಿದೆ. ಆದರೆ ಈ ಕುರಿತು ತಾಲೂಕು ಆಡಳಿತವಾಗಲಿ, ಗೋ ಶಾಲೆ ಆಡಳಿತ ಮಂಡಳಿಯಾಗಲಿ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಹೀಗಾಗಿ ದಿನಕ್ಕೊಂದು ಜಾನುವಾರುಗಳು ಅನಾರೋಗ್ಯಕ್ಕೀಡಾಗಿ ಜೀವ ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದು ಮೂಟೆ ಮೇವು ಹಾಕಿ ನೂರಾರು ಜಾನುವಾರುಗಳು ತಿನ್ನುವಂತೆ ಮಾಡಲಾಗಿದ್ದು, ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಬರ ನಿರ್ವಹಣೆ ಮಾಡುವಲ್ಲಿ ತಾಲೂಕು ಆಡಳಿತ ವಿಫಲವಾಗಿದೆ. ಜನ ನೀರನ್ನ ಹೇಗಾದ್ರು ತಂದು ಜೀವನ ಮಾಡ್ತಾರೆ. ಆದ್ರೆ ಜಾನುವಾರುಗಳಿಗೆ ಸತತ ಎರಡು ತಿಂಗಳಿಂದ ಸರಿಯಾಗಿ ನೀರು, ಮೇವು ಸಿಗದೇ ಹೀಗೆ ಸಾಲು ಸಾಲು ಸಾವನ್ನಪ್ಪುತ್ತಿವೆ. ಇದಕ್ಕೆ ಸರ್ಕಾರವಾಗಲಿ, ಗೋ ಶಾಲಾ ಆಡಳಿತವಾಗಲಿ ಸ್ಪಂದಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಪಟ್ಟಣದ ಯುವಕರ ಗುಂಪೊಂದು ಗೋ ಶಾಲೆಯಲ್ಲಿ ಹೀಗೆ ನರಳಾಡುವ ಜಾನುವಾರುಗಳ ರಕ್ಷಣೆಗಾಗಿ ತಂಡ ಮಾಡಿಕೊಂಡು ಪಶು ಆರೋಗ್ಯಾಧಿಕಾರಿಗಳ ಗಮನ ಸೆಳೆದು ಚಿಕಿತ್ಸೆ ಕೊಡಿಸಿದೆ. ಅಲ್ಲದೆ ತಮ್ಮಿಂದಾದಷ್ಟು ಮೇವಿನ ವ್ಯವಸ್ಥೆ ಕೂಡ ಮಾಡಿದ್ದು, ಅಮರೇಶ್ವರ ಗೋ ಶಾಲೆಯಲ್ಲಿ ಜಾನುವಾರುಗಳ ಮರಣ ಮೃದಂಗ ತಡೆಗಟ್ಟಲು ವಾಟ್ಸಪ್ ಗ್ರೂಪ್ ಒಂದನ್ನು ರಚಿಸಿ ಸಾರ್ವಜನಿಕರ ಸಹಕಾರ ಕೇಳಿದೆ.