ಬಳ್ಳಾರಿ: ನಗರ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸರ್ಕಾರಿ ಅತಿಥಿ ಗೃಹದಲ್ಲಿ ಸ್ಥಳೀಯರ ಸಾಕಷ್ಟು ವಿರೋಧದ ನಡುವೆ ಅಂದಾಜು 50 ಬೆಡ್ಗಳ ಕೋವಿಡ್ ಕೇರ್ ಐಸೋಲೇಷನ್ ಕೇಂದ್ರಕ್ಕೆ ಇಂದು ಚಾಲನೆ ನೀಡಲಾಯಿತು.

ಆದರೆ, ಸ್ಥಳೀಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಪಕ್ಕದಲ್ಲೇ ಪ್ರಶಾಂತ ನಗರವಿದೆ. ಇಲ್ಲಿ ಸುಮಾರು 800 ಮನೆಗಳಿವೆ. ಈ ನಗರದಲ್ಲಿ ಬಡವರೇ ಹೆಚ್ಚಾಗಿದ್ದಾರೆ. ಸಾಲದೆಂಬಂತೆ ಮಕ್ಕಳು, ಮುದುಕರು, ಮಹಿಳೆಯರು ಸೇರಿದಂತೆ ನೂರಾರು ಜನ ಸದ್ಯಕ್ಕೆ ಚೆನ್ನಾಗಿದ್ದಾರೆ. ನಮ್ಮ ವಿರೋಧದ ನಡುವೆ ಈಗ ಇಲ್ಲಿ ಕೋವಿಡ್ ಕೇರ್ ಕೇಂದ್ರ ಸ್ಥಾಪಿಸಿದ್ದಾರೆ. ಇದರಿಂದ ಸ್ಥಳೀಯರಿಗೆ ಸೋಂಕು ತಾಗಿದರೆ ಏನು ಮಾಡಬೇಕು? ಬಡವರಿರುವ ಈ ನಗರದಲ್ಲಿ ಕೊರೊನಾ ಬಂದ್ರೆ ಯಾರು ಹೊಣೆ? ಎಂದು ಸ್ಥಳೀಯರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಈ ಕರ್ಫ್ಯೂನಲ್ಲಿ ಸರಿಯಾದ ಕೆಲಸವಿಲ್ಲ. ನಾವುಗಳು ನಿತ್ಯ ದುಡಿದು ತಿನ್ನಬೇಕು. ಐಸೋಲೇಷನ್ ಕೇಂದ್ರವನ್ನು ಇಲ್ಲಿ ನಿರ್ಮಿಸದಂತೆ ಕಳೆದ ರಾತ್ರಿ ನಾವು ವಿರೋಧ ಮಾಡಿದ್ದೆವು. ಆಗ ಪೊಲೀಸರು ಜಿಲ್ಲಾಧಿಕಾರಿ ಆದೇಶವಾಗಿದೆ, ಬೆಳಗ್ಗೆ ಬನ್ನಿ ಎಂದು ಹೇಳಿ ಕಳಿಸಿದ್ದರು. ಶಾಸಕ ನಾಗೇಂದ್ರ ಅವರನ್ನು ಭೇಟಿ ಮಾಡಿ ಸಮಸ್ಯೆ ಹೇಳಿಸಲಾಗಿತ್ತು.

ಆದರೆ, ಈಗ ಸೋಲೇಷನ್ ಕೇಂದ್ರಕ್ಕೆ ಇಂದು ಚಾಲನೆ ನೀಡಿದ್ದಾರೆ. ಇದರಿಂದ ಸಮಸ್ಯೆಯಾದಲ್ಲಿ ಯಾರು ಹೊಣೆ ಎಂದು ಪೊಲೀಸರೊಂದಿಗೆ ಸ್ಥಳೀಯರು ಮಾತಿನ ಚಕಮಕಿ ನಡೆಸಿದರು. ಕೊನೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರಿಗೆ ಸಮಾಧಾನ ಹೇಳಿದರು. ಬೇರೆ ದಾರಿ ಕಾಣದ ಸ್ಥಳೀಯರು ಅಲ್ಲಿಂದ ತೆರಳಿದರು.