ಬಳ್ಳಾರಿ: ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕೋವಿಡ್ನಿಂದ ಗುಣಮುಖರಾದ ಮಕ್ಕಳಲ್ಲಿ ಹೊಸದಾದ ಮಿಸ್- ಸಿ ಕಾಯಿಲೆ ಪತ್ತೆಯಾಗಿದೆ. ಕೊರೊನಾ, ಬ್ಲ್ಯಾಕ್ ಫಂಗಸ್ ಹಾಗೂ ಮೂರನೇ ಅಲೆಯ ಆತಂಕದ ನಡುವೆ ಹೊಸದಾದ ರೋಗ ಪತ್ತೆಯಾಗಿರುವುದು ಉಭಯ ಜಿಲ್ಲೆಗಳ ಜನರನ್ನು ಭೀತಿಗೆ ದೂಡಿದೆ.
ಕೊರೊನಾ ಸೋಂಕಿಗೆ ಒಳಗಾಗಿ ಗುಣಮುಖರಾದ ಕೆಲವೇ ಕೆಲ ಮಕ್ಕಳಲ್ಲಿ ಮಿಸ್-ಸಿ (MIS- C) ಕಾಯಿಲೆ ಕಂಡುಬಂದಿದೆ. ಬಳ್ಳಾರಿ- ವಿಜಯನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಈವರೆಗೆ 35 ಮಕ್ಕಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು, ಸದ್ಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
MIS- C ಎಂದರೇನು?
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಹೆಚ್ಓ ಜನಾರ್ದನ್, ಇದನ್ನು ಮಲ್ಟಿ ಆರ್ಗನ್ ಇನ್ ಫೆಂಟ್ರಿ ಸಿಂಡ್ರೋಮ್ ಇನ್ ಚಿಲ್ಡ್ರನ್ ( ಮಿಸ್- ಸಿ) ಎಂದು ಕರೆಯಲಾಗುತ್ತದೆ ಎಂದಿದ್ದಾರೆ. ಈ ರೋಗಕ್ಕೆ ತುತ್ತಾಗಿರುವ ಮಕ್ಕಳನ್ನು ಪರೀಕ್ಷಿಸಿದಾಗ ಕೋವಿಡ್ ರೋಗ ನಿರೋಧಕ ಶಕ್ತಿ ಬೆಳೆದಿರುತ್ತದೆ. ಅಂದರೆ ಕೋವಿಡ್ ಬಂದಿರುವುದು ಗೊತ್ತಾಗದೆ ಇದ್ದರೂ ಕೊರೊನಾ ಬಂದು ಹೋಗಿರೋದನ್ನು ಈ ರೋಗ ಖಚಿತಪಡಿಸುತ್ತದೆ.
ಯಾವ ಮಕ್ಕಳು ಕೊರೊನಾಗೆ ತುತ್ತಾಗಿ ಗುಣಮುಖರಾಗಿರುತ್ತಾರೋ ಅಂತಹ ಮಕ್ಕಳಿಗೆ ಎರಡು-ಮೂರು ವಾರಗಳ ನಂತರ ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಆ ಸಮಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿರುತ್ತದೆ. ಮೂತ್ರಪಿಂಡ, ಲಿವರ್ ಸಹಿತ ದೇಹದ ಬಹುತೇಕ ಅಂಗಾಂಗಗಳಿಗೆ ತೊಂದರೆಯಾಗುತ್ತದೆ.
ಜಿಲ್ಲೆಯಲ್ಲಿ ಈವರೆಗೆ 3,500 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರೋದು ಬೆಳಕಿಗೆ ಬಂದಿದೆ. ಆ ಪೈಕಿ 35 ಮಕ್ಕಳಲ್ಲಿ ಮಿಸ್- ಸಿ ರೋಗ ಕಾಣಿಸಿಕೊಂಡಿದೆ. ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರೋದು ಜನರ ಕಳವಳಕ್ಕೆ ಕಾರಣವಾಗಿದೆ.
ANEC ಎಂಬ ಮತ್ತೊಂದು ರೋಗವೂ ಪತ್ತೆ!
ಮಿಸ್-ಸಿ ಯ ನಂತರ ಎಎನ್ಇಸಿ ಎಂಬ ಮತ್ತೊಂದು ರೋಗ ಕಾಣಿಸಿಕೊಂಡಿದೆ. ಇದನ್ನು ಅಕ್ಯೂಟ್ ನೈಟ್ರೈ ಟೈಸಿಂಗ್ ಮೆಅನಿಂಗ್ ಇನ್ ಕೆಫಲೋಪಥಿ ಇನ್ ಚಿಲ್ಡ್ರನ್ ಎಂದು ಕರೆಯಲಾಗುತ್ತದೆ. ಮಿಸ್-ಸಿ ಕಾಯಿಲೆ ಬಂದ ಬಾಲಕನನ್ನು ಮತ್ತೊಮ್ಮೆ ತಪಾಸಣೆಗೆ ಒಳಪಡಿಸಿದಾಗ ಎಎನ್ಇಸಿ ರೋಗ ಇರುವುದು ಪತ್ತೆಯಾಗಿದೆ. ಈ ವೈರಸ್ ನೇರವಾಗಿ ಮೆದುಳಿನ ಮೇಲೆ ನೇರ ದಾಳಿ ನಡೆಸುತ್ತದೆ.
ಈ ರೋಗ ಇಡೀ ದೇಶದಲ್ಲೇ ಮೊದಲಿಗೆ ಗಣಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ 13 ವರ್ಷದ ಬಾಲಕನಲ್ಲಿ ಮಿಸ್- ಸಿ ಕಂಡು ಬಂದಿತ್ತು. ಆ ಬಾಲಕನಿಗೆ ಮತ್ತೊಮ್ಮೆ ಪರೀಕ್ಷಿಸಿದಾಗ ಎಎನ್ ಇಸಿ ರೋಗ ಇರೋದು ಕಂಡು ಬಂದಿರೋದು ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಇದನ್ನೂ ಓದಿ:ಕೋವಿಡ್ ವೇಳೆಯಲ್ಲೂ ಅಹಮದಾಬಾದ್ ಐಐಎಂ ಶ್ಲಾಘನೀಯ ಕಾರ್ಯ: 450ಕ್ಕೂ ಹೆಚ್ಚು ಮಂದಿಗೆ ಉದ್ಯೋಗ
ಮಿಸ್- ಸಿ ಹಾಗೂ ಎಎನ್ಇಸಿ ರೋಗಿಗಳಿಗೆ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಹೆಚ್ಓ ಡಾ. ಹೆಚ್.ಎಲ್. ಜನಾರ್ದನ್ ತಿಳಿಸಿದ್ದಾರೆ.