ಬಳ್ಳಾರಿ : ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೂಲಿ ಅರಸಿ ತೆರಳಿದ್ದ ಕೂಲಿಕಾರ್ಮಿಕರಿಂದಲೂ ಗಣಿನಾಡು ಬಳ್ಳಾರಿ ಜಿಲ್ಲೆಗೆ ಸಂಕಷ್ಟ ಎದುರಾಗಿದೆ. ಜಿಲ್ಲೆಯ ಕಂಪ್ಲಿ ತಾಲೂಕಿನ ಕಾರ್ಮಿಕರೊಬ್ಬರಲ್ಲಿ ಕಂಡು ಬಂದ ಕೊರೊನಾ ಸೋಂಕು ಇದಕ್ಕೆ ತಾಜಾ ಉದಾಹರಣೆಯಾಗಿದೆ.
ಬೆಂಗಳೂರಿನಿಂದ ಬಳ್ಳಾರಿ ಜಿಲ್ಲೆಗೆ ಬಂದ ಕಾರ್ಮಿಕನಲ್ಲಿ ಈಗ ಕೊರೊನಾ ಸೋಂಕು ದೃಢವಾಗಿದೆ. ಜಿಲ್ಲೆಯ ಕಂಪ್ಲಿ ಪಟ್ಟಣದ 37 ವರ್ಷದ ಕಟ್ಟಡ ಕಾರ್ಮಿಕನಲ್ಲಿ ಈ ಸೋಂಕು ಇರೋದು ದೃಢವಾಗಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ಈ ವ್ಯಕ್ತಿ ಮೇ 5ರಂದು ಬೆಂಗಳೂರಿನಿಂದ ಸರ್ಕಾರಿ ಬಸ್ನಲ್ಲಿ ತನ್ನ ಪತ್ನಿ ಹಾಗೂ ಎರಡು ಮಕ್ಕಳ ಜೊತೆಯಲ್ಲಿ ಮೊದಲು ಗಂಗಾವತಿಗೆ ಬಂದಿದ್ದಾನೆ. ಗಂಗಾವತಿಯಿಂದ ಆಟೋರಿಕ್ಷಾ ಒಂದರಲ್ಲಿ ಕಂಪ್ಲಿಗೆ ಬಂದಿದ್ದಾನೆ. ಕಳೆದ ಎರಡು ದಿನಗಳ ಹಿಂದೆ ಸೋಂಕಿನ ಗುಣ ಲಕ್ಷಣಗಳು ಕಂಡ ಬಂದ ಹಿನ್ನೆಲೆಯಲ್ಲಿ ರಕ್ತ ಮತ್ತು ಗಂಟಲು ದ್ರವ ಪರೀಕ್ಷೆ ನಡೆಸಲಾಗಿ ಕೊರೊನಾ ಇರುವುದು ದೃಢವಾಗಿದೆ.
ಗುಳೆ ಹೋದ ಕಾರ್ಮಿಕರಿಂದ ಕುತ್ತು : ಕೂಲಿ ಅರಸಿ ಬೆಂಗಳೂರಿಗೆ ಹೋಗಿ ವಾಪಸ್ ಆದ ಕೂಲಿ ಕಾರ್ಮಿಕರಿಂದಲೂ ರಾಜ್ಯದ ನಾನಾ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಕೆಎಸ್ಆರ್ಟಿಸಿ ಬಸ್ನಲ್ಲಿ ತಮ್ಮ ತಮ್ಮ ಊರುಗಳಿಗೆ ವಾಪಸ್ ಆದ ಕೂಲಿ ಕಾರ್ಮಿಕರಿಂದ ಇದೀಗ ಒಂದೊಂದೇ ಪ್ರಕರಣ ಪಾಸಿಟಿವ್ ಬರುತ್ತಿವೆ. ಹೀಗಾಗಿ ಬೆಂಗಳೂರಿನಿಂದ ಬಂದ ವಲಸೆ ಕಾರ್ಮಿಕರನ್ನು ಹುಡುಕಿ ಕ್ಯಾರಂಟೈನ್ ಮಾಡುವುದು ಅನಿವಾರ್ಯವಾಗಿದೆ.
ಈ ಸೋಂಕಿತ ವ್ಯಕ್ತಿ ಪ್ರಯಾಣಿಸಿದ ಬಸ್ನಲ್ಲಿದ್ದ 32ಕ್ಕೂ ಹೆಚ್ಚು ಪ್ರಯಾಣಿಕರ ಹುಡುಕಾಟ ಆರಂಭವಾಗಿದೆ. ಅಲ್ಲದೇ ಈತನನ್ನು ಗಂಗಾವತಿಯಿಂದ ಕಂಪ್ಲಿಗೆ ಕರೆತಂದ ಆಟೋ ಚಾಲಕನಿಗಾಗಿ ಹುಡುಕಾಟ ಕೂಡ ನಡೆಸಲಾಗುತ್ತಿದೆ.