ಬಳ್ಳಾರಿ: ನಗರದ ಜೆಎಂಎಫ್ಸಿ ಕೋರ್ಟ್ನ ತುರ್ತು ವಿಚಾರಣೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸುವುದಾಗಿ ಹಾಗೂ ಕಕ್ಷಿದಾರರು, ಅವರ ಪರ ವಕೀಲರಿಗೆ ಕೋರ್ಟ್ಗೆ ಪ್ರವೇಶಿಸದಂತೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ ಎಂದು ನ್ಯಾಯಾಧೀಶ ಕೃಷ್ಣರಾಜ ಬಿ. ಅಸೋಡೆ ತಿಳಿಸಿದ್ದಾರೆ.
ಕೊರೊನಾ ಹೆಮ್ಮಾರಿ ತಡೆಗೆ ಕೋರ್ಟ್ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವೂ ಸೂಕ್ತ ಕ್ರಮಕ್ಕೆ ಮುಂದಾಗಿದೆ. ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಬಂಧಿ ಕೈದಿಗಳನ್ನು ಕೋರ್ಟ್ಗೆ ಹಾಜರುಪಡಿಸುವಂತಿಲ್ಲ. ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಕಾರಾಗೃಹದ ಹಾಗೂ ಹೊಸ ಕೈದಿಗಳ ಆರೋಗ್ಯ ತಪಾಸಣೆ ಮಾಡಿಸುವಂತೆ ಈಗಾಗಲೇ ಬಳ್ಳಾರಿ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಜಾಮೀನು ಅರ್ಜಿಗಳ ಇತ್ಯರ್ಥಕ್ಕೆ ಆದ್ಯತೆ: ತುರ್ತು ಜಾಮೀನು ಪಡೆಯುವ ಅರ್ಜಿಗಳನ್ನು ಇತ್ಯರ್ಥಗೊಳಿಸುವ ಕಾರ್ಯವನ್ನು ಸದ್ಯಕ್ಕೆ ಮಾಡಲಾಗುತ್ತದೆ. ಸಾಮಾನ್ಯ ಕಕ್ಷಿದಾರರ ಅರ್ಜಿಗಳ ಇತ್ಯರ್ಥ ಹಾಗೂ ವಕೀಲರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದರು.