ಬಳ್ಳಾರಿ: ಜಿಲ್ಲಾ ಪೊಲೀಸ್ ಹಾಗೂ ಸನ್ಮಾರ್ಗ ಗೆಳೆಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿರುವ ಕೊರೊನಾ ಜನಜಾಗೃತಿ ವಾಹನಕ್ಕೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಎಸ್ಪಿ ಕಚೇರಿ ಆವರಣದಲ್ಲಿಂದು ಚಾಲನೆ ನೀಡಿದರು.
ಈ ಕೊರೊನಾ ಜನಜಾಗೃತಿ ವಾಹನವು ಮೊದಲಿಗೆ ಬಳ್ಳಾರಿ ನಗರದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಲಿದ್ದು, ತದನಂತರ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಚಾಲನೆ ನೀಡಿದ ನಂತರ ಮಾತನಾಡಿದ ಎಸ್ಪಿ ಸಿ.ಕೆ.ಬಾಬಾ, ಕೊರೊನಾ ಮಹಾಮಾರಿ ದಿನೇದಿನೇ ವ್ಯಾಪಕವಾಗುತ್ತಿದ್ದು, ಇದರಿಂದ ರಕ್ಷಿಸಿಕೊಳ್ಳಲು ನಮಗಿರುವ ಮಾರ್ಗ ಒಂದೇ ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲನೆ ಮಾಡುವುದು, ಕಡ್ಡಾಯ ಮಾಸ್ಕ್ ಧರಿಸುವಿಕೆ ಹಾಗೂ ಸ್ಯಾನಿಟೈಸ್ ಮಾಡುವುದು ಎಂದರು.
![Bellary](https://etvbharatimages.akamaized.net/etvbharat/prod-images/kn-01-bly-270720-sp-news-ka10007_27072020165950_2707f_1595849390_575.jpg)
ಕೊರೊನಾ ಬಂದ ತಕ್ಷಣ ಭಯಪಡದೇ ವೈದ್ಯರು ನೀಡುವ ಸಲಹೆಗಳನ್ನು ಪಾಲಿಸಬೇಕು ಎಂದರು. ಈ ರೀತಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸರ್ಕಾರದ ಜೊತೆಗೆ ಸನ್ಮಾರ್ಗ ಗೆಳೆಯರ ಬಳಗ ಕೈಜೋಡಿಸಿರುವುದು ಸಂತಸದ ಸಂಗತಿ. ಹೆಚ್ಚೆಚ್ಚು ಸ್ವಯಂ ಸೇವಾ ಸಂಘಗಳು ಇಂತಹ ಕಾರ್ಯಗಳಲ್ಲಿ ಭಾಗಿಯಾಗಬೇಕು ಎಂದರು.
ಈ ವಾಹನದಲ್ಲಿ ಜನಜಾಗೃತಿ ಮೂಡಿಸುವ ಸಂದೇಶಗಳ ಬೃಹತ್ ಫಲಕಗಳನ್ನು ಅಳವಡಿಸಲಾಗಿದೆ. ಇದರ ಜೊತೆಗೆ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಧ್ವನಿ ಸಂದೇಶವು ಪ್ರಸಾರವಾಗಲಿದೆ. ಈ ಸಂದರ್ಭದಲ್ಲಿ ಸನ್ಮಾರ್ಗ ಗೆಳೆಯರ ಬಳಗದ ಅಧ್ಯಕ್ಷರಾದ ಹೆಚ್.ಲಕ್ಷ್ಮೀಕಾಂತರೆಡ್ಡಿ, ಖಜಾಂಚಿ ತೇಜ ರಘುರಾಮರಾವ್, ಬಳಗದ ಕಾರ್ಯದರ್ಶಿ ಕಪ್ಪಗಲ್ ಬಿ.ಚಂದ್ರಶೇಖರ ಆಚಾರ್ ಮತ್ತಿತರರು ಇದ್ದರು.