ಬೆಳಗಾವಿ : ಜಿಲ್ಲೆಗೆ ಗೋವಾದಿಂದ ಅನಧಿಕೃತ ಮದ್ಯ ಸಾಗಿಸುವ ಕೆಲಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಬೆಳಗಾವಿ ಮತ್ತು ಗೋವಾ ಗಡಿಯಲ್ಲಿ ರಾತ್ರಿಯ ವೇಳೆ ಹೆಚ್ಚು ನಿಗಾವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಬಕಾರಿ ಸಚಿವ ಹೆಚ್ ನಾಗೇಶ್ ತಿಳಿಸಿದರು.
ಸುವರ್ಣ ಸೌಧದಲ್ಲಿಂದು ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಅವರು, ಕಳ್ಳ ಭಟ್ಟಿ ಮಾಡುವವರಿಗೆ ಹೆಚ್ಚಿನ ದಂಡ ಹಾಗೂ ಕಠಿಣ ಶಿಕ್ಷೆ ನೀಡಲು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ದಂಡ ಕಟ್ಟುವುದರಿಂದ ಕಳ್ಳ ಭಟ್ಟಿ ಮಾಡುವ ಪ್ರಮಾಣ ಕಡಿಮೆ ಆಗುತ್ತದೆ ಎಂದು ತಿಳಿಸಿದರು.
ಮುಂದಿನ ವರ್ಷ ಅಬಕಾರಿ ಇಲಾಖೆಯ ಎಲ್ಲಾ ವರ್ಗದ ಸಿಬ್ಬಂದಿಗೆ ಬಡ್ತಿ ನೀಡಲಾಗುವುದು. ಎಮ್ಆರ್ಪಿ ಅಂಗಡಿಗಳಿಗೆ ಹೊಸದಾಗಿ ಲೈಸೆನ್ಸ್ ನೀಡುವುದಿಲ್ಲ. ಅದಕ್ಕೆ ಸರ್ಕಾರದಿಂದಲೂ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಅಬಕಾರಿ ಇಲಾಖೆಯಲ್ಲಿ ರಾಜ್ಯಮಟ್ಟದ ಸಹಾಯವಾಣಿ ಆರಂಭಿಸಲಾಗುವುದು ಎಂದು ಸಚಿವ ಹೆಚ್ ನಾಗೇಶ್ ತಿಳಿಸಿದರು.