ಬೆಳಗಾವಿ/ಚಿಕ್ಕೋಡಿ : ಪತ್ನಿಯ ಜೊತೆ ಡೆಹ್ರಾಡೂನ್ನಿಂದ ಆಗಮಿಸಿದ ಯೋಧ ಊರು ತಲುಪಲು ಬಸ್ ಸಿಗದೆ ಪರದಾಡಿದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ಯೋಧ ಅರುಣ ಪಾಟೀಲ ಪತ್ನಿಯೊಂದಿಗೆ ತುರ್ತು ರಜೆ ಮೇಲೆ ನಿನ್ನೆ ಡೆಹ್ರಾಡೂನ್ನಿಂದ ಬೆಂಗಳೂರಿಗೆ ವಿಮಾನದ ಮೂಲಕ ಆಗಮಿಸಿದ್ದರು. ಬೆಂಗಳೂರಿನಿಂದ ಬೆಳಗಾವಿಗೆ ಕ್ಯಾಬ್ ಮೂಲಕ ಬಂದಿದ್ದಾರೆ. ಇಂದು ಬೆಳಗ್ಗೆ ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ಇವರು, ರವಿವಾರ ಸಂಪೂರ್ಣ ಲಾಕ್ಡೌನ್ ಹಿನ್ನೆಲೆಯಲ್ಲಿ ಮನೆ ತಲುಪಲು ಬಸ್ ಸಿಗದೆ ಕೆಲಕಾಲ ಪರದಾಡಿದರು. ಬಳಿಕ ಕ್ಯಾಬ್ ಮೂಲಕ ಸ್ವಗ್ರಾಮಕ್ಕೆ ತೆರಳಿದರು.
ಬೆಳಗಾವಿಯ ಪ್ರಮುಖ ರಸ್ತೆಗಳಲ್ಲಿ ಸ್ಯಾನಿಟೈಜೆಷನ್ :
ನಗರದ ಪ್ರಮುಖ ರಸ್ತೆಗಳಲ್ಲಿ ಮಹಾನಗರ ಪಾಲಿಕೆ ಸಿಬ್ಬಂದಿಗಳಿಂದ ಸ್ಯಾನಿಟೈಸಿಂಗ್ ಕಾರ್ಯ ನಡೆಯುತ್ತಿದೆ. ಚೆನ್ನಮ್ಮ ವೃತ್ತ, ನಗರ ಸಾರಿಗೆ ಬಸ್ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸ್ಯಾನಿಟೈಸ್ ಮಾಡುವ ಮೂಲಕ ಪಾಲಿಕೆ ಸಿಬ್ಬಂದಿ ಶುಚಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ಚಿಕ್ಕೋಡಿ ಉಪವಿಭಾಗ ಸಂಪೂರ್ಣ ಸ್ತಬ್ಧ:
ಲಾಕ್ಡೌನ್ ಹಿನ್ನೆಲೆಯಲ್ಲಿ ಚಿಕ್ಕೋಡಿ ಉಪವಿಭಾಗ ಸ್ತಬ್ಧವಾಗಿದೆ. ಕೆಎಸ್ಆರ್ಟಿಸಿ ಬಸ್, ಖಾಸಗಿ ವಾಹನ, ಆಟೋ ಸಂಚರಿಸುತ್ತಿಲ್ಲ. ಲಾಕ್ ಡೌನ್ ಹೇರಿರುವ ವಿಚಾರ ತಿಳಿಯದ ಹಳ್ಳಿಯ ಜನರು ಚಿಕ್ಕೋಡಿ ಪಟ್ಟಣಕ್ಕೆ ಕೆಲಸದ ನಿಮಿತ್ತ ಆಗಮಿಸಿದ್ದರು. ಅವರನ್ನು ಚಿಕ್ಕೋಡಿ ಪೊಲೀಸರು ಮರಳಿ ಮನೆಗೆ ಕಳುಹಿಸಿದರು.
ಆಸ್ಪತ್ರೆ, ಮೆಡಿಕಲ್, ಹಾಲು ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲಾಗಿದೆ. ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೆ ನಗರದಾದ್ಯಂತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.