ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಬೆಂಗಾವಲು ಪಡೆಯ ವಾಹನದ ಮೇಲೆ ನಡೆಸದ ದಾಳಿಯ ಕುರಿತು ತನಿಖೆಗೆ ಆದೇಶ ನೀಡುವಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒತ್ತಾಯಿಸಿದ್ದಾರೆ.
ಅಭಿಶೇಕ್ ಬ್ಯಾನರ್ಜಿ ಅವರ ಲೋಕಸಭಾ ಕ್ಷೇತ್ರ ಡೈಮಂಡ್ ಹಾರ್ಬರ್ಗೆ ತೆರಳುತ್ತಿದ್ದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಅವರ ಬೆಂಗಾವಲು ಪಡೆಯ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ನಡ್ಡಾ ಹಾಗೂ ಇತರೆ ಬಿಜೆಪಿ ನಾಯಕರು ತೆರಳುತ್ತಿದ್ದ ವಾಹನಗಳ ಮೇಲೆ ಕಲ್ಲು ಹಾಗೂ ಸಾಫ್ಟ್ ಡ್ರಿಕ್ಸ್ ಬಾಟಲ್ ಗಳನ್ನು ಎಸೆಯಲಾಗಿದೆ. ನಡ್ಡಾ ಅವರ ಕಾರು ಬುಲೆಟ್ ಪ್ರೂಫ್ ವಾಹನ ಆಗಿದ್ದರಿಂದ ಅವರು ಸುರಕ್ಷಿತವಾಗಿದ್ದಾರೆ. ಈ ದಾಳಿಯಲ್ಲಿ ಕನಿಷ್ಠ ಸುಮಾರು 15 ವಾಹನಗಳು ಜಖಂಗೊಂಡಿವೆ.
ನಡ್ಡಾ ಬೆಂಗಾವಲು ವಾಹನದ ಮೇಲೆ ದಾಳಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪ್ರತಿಭಟನೆ
ಪಶ್ಚಿಮ ಬಂಗಾಳದ ಹಿರಿಯ ನಾಯಕರು ಮತ್ತು ಕಾರ್ಯಕರ್ತರು ನಮ್ಮ ಪಕ್ಷದ ಅಧ್ಯಕ್ಷ ಜೆ.ಪಿ.ನಾಡ್ಡ ಅವರ ಬೆಂಗಾವಲು ಪಡೆ ಮೇಲೆ ನಡೆದ ಕಲ್ಲು ತೂರಾಟ ಮತ್ತು ದಾಳಿಯ ಸುದ್ದಿಗಳಿಂದ ವಿಚಲಿತರಾಗಿದ್ದಾರೆ. ಕೂಡಲೇ ಘಟನೆಗಳ ಬಗ್ಗೆ ತನಿಖೆಗೆ ಆದೇಶಿಸಬೇಕು. ನಮ್ಮ ಕಾರ್ಯಕರ್ತರ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಸಿಎಂ ಬಿಎಸ್ವೈ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.