ಬೆಂಗಳೂರು: ಕೊರೊನಾ ಭೀತಿಯಿಂದ ಜನ ಒಂದೆಡೆ ತತ್ತರಿಸಿ ಹೋಗುತ್ತಿದ್ದರೆ, ಮತ್ತೊಂದೆಡೆ ಪರಪ್ಪನ ಅಗ್ರಹಾರ ಜೈಲು ಹಕ್ಕಿಗಳು ಬಂಧಮುಕ್ತವಾಗುತ್ತಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸದ್ಯ 4 ಸಾವಿರಕ್ಕೂ ಹೆಚ್ವು ಕೈದಿಗಳಿದ್ದಾರೆ. ಜೈಲಿನ ನಿಯಮ ಹಾಗೂ ಅಲ್ಲಿರುವ ವ್ಯವಸ್ಥೆಯ ಪ್ರಕಾರ ಸುಮಾರು 2 ಸಾವಿರ ಮಂದಿ ಮಾತ್ರ ಇರಬಹುದಷ್ಟೇ. ಸದ್ಯ ಜೈಲಿನಲ್ಲಿಯೂ ಕೂಡ ಕೊರೊನಾ ಸೋಂಕು ಹರಡುವ ಆತಂಕದಿಂದ 500- 600 ಮಂದಿಯನ್ನು ರಿಲೀಸ್ ಮಾಡಲು ಜೈಲಾಧಿಕಾರಿಗಳು ತೀರ್ಮಾನಿಸಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ಕೈದಿಗಳು ಯಾರಿಗೆ ಬಿಡುಗಡೆ ಭಾಗ್ಯ?:
ಸಣ್ಣ ಪುಟ್ಟ ಕಳ್ಳತನ, ಸುಲಿಗೆ, ದರೋಡೆ, ಅಟೆಂಷನ್ ಡೈವರ್ಷನ್... ಈ ರೀತಿಯ ಪ್ರಕರಣಗಳಲ್ಲಿ ಸಿಲುಕಿರುವ ಕೈದಿಗಳು ಬಿಡುಗಡೆಯಾಗಲಿದ್ದಾರೆ. ಈ ವಿಚಾರ ತಿಳಿದು ಬೆಂಗಳೂರು ನಗರದ ಸುಮಾರು 80ಕ್ಕೂ ಹೆಚ್ಚು ಠಾಣೆಗಳ ಪೊಲೀಸರು ಜೈಲಿಗೆ ದೌಡಾಯಿಸಿ ತಮ್ಮ ತಮ್ಮ ಠಾಣೆಯ ಅಪರಾಧಿಗಳ ಪೈಕಿ ಮಾಹಿತಿ ಸಂಗ್ರಹಿಸಿದ್ದಾರೆ.ಯಾಕಂದ್ರೆ, ಒಮ್ಮೆ ಹೊರಗಡೆ ಹೋದ್ರೆ ಕೈದಿಗಳು ಮತ್ತದೇ ತಮ್ಮ ಹಳೆಯ ಚಾಳಿ ಮುಂದುವರಿಸುವ ಸಂಭವವಿರುತ್ತದೆ. ಹಾಗೆಯೇ ಕೆಲವರ ಮೇಲಿನ ಪ್ರಕರಣಗಳು ಕೂಡಾ ತನಿಖಾ ಹಂತದಲ್ಲಿದೆ. ಹೀಗಾಗಿ ಬಿಡುಗಡೆಯಾಗುವ ಕೆಲವರನ್ನು ಮತ್ತೆ ಠಾಣಾ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.