ಬೆಂಗಳೂರು: ಬಿಎಂಟಿಸಿಗೆ 25 ವರ್ಷಗಳಾಗಿವೆ. ಮೊದಲಿಗೆ ಕೇವಲ 98 ಬಸ್ಸಿನಿಂದ ಕಾರ್ಯಾಚರಣೆ ಆರಂಭವಾಗಿತ್ತು. ಆ ವೇಳೆ ಬೆಂಗಳೂರು ಚಿಕ್ಕದಾಗಿತ್ತು. ಸಾರಿಗೆ ಅಗತ್ಯವೂ ಕೂಡ ಕಡಿಮೆಯಿತ್ತು. ಆದರೆ ಈಗ ನಗರ ಬಹುದೊಡ್ಡದಾಗಿದೆ. ಸಾರಿಗೆ ಸಂಸ್ಥೆ ಕೂಡ ಹೆಮ್ಮರವಾಗಿ ಬೆಳೆದುನಿಂತಿದೆ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.
![ಬಿಎಂಟಿಸಿ ರಜತ ಮಹೋತ್ಸವ](https://etvbharatimages.akamaized.net/etvbharat/prod-images/26-09-2023/kn-bng-09-bmtc-25years-of-celebration-7210969_26092023001030_2609f_1695667230_458.jpg)
ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಬಿಎಂಟಿಸಿ ರಜತ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸದ್ಯ ದೇಶಕ್ಕೆ ಮಾದರಿಯಾಗಿರುವ ಬಿಎಂಟಿಸಿ ಸಂಸ್ಥೆಗೆ ಇನ್ನಷ್ಟು ಉತ್ತಮ ಸಕಾರ ಅಗತ್ಯವಾಗಿದೆ. ಸಂಸ್ಥೆಯನ್ನು ಇನ್ನಷ್ಟು ಬೆಳೆಸಲು ಪ್ರತಿಯೊಬ್ಬ ನೌಕರರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.
![ಬಿಎಂಟಿಸಿ ರಜತ ಮಹೋತ್ಸವ](https://etvbharatimages.akamaized.net/etvbharat/prod-images/26-09-2023/kn-bng-09-bmtc-25years-of-celebration-7210969_26092023001030_2609f_1695667230_356.jpg)
ಕೆಎಸ್ಆರ್ಟಿಸಿಯ ನೌಕರರಿಗೆ 1 ಕೋಟಿ ರೂ ವಿಮೆ ನೀಡಲಾಗುತ್ತಿದೆ. ಇದನ್ನು ಬಿಎಂಟಿಸಿಗೆ ಕೂಡ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಮಜೆಸ್ಟಿಕ್ನಲ್ಲಿ ಕ್ಯಾಂಟಿನ್ ವ್ಯವಸ್ಥೆಯಿರಲಿಲ್ಲ, ದೊಡ್ಡದಾದ ಬಿಎಂಟಿಸಿ ಕ್ಯಾಂಟಿನ್ ತೆರೆಯಲಾಗುತ್ತಿದೆ ಎಂದು ತಿಳಿಸಿದರು. ನಮ್ಮ ಹೆಮ್ಮೆಯ ಸಾರಿಗೆ ಸಂಸ್ಥೆಗಳಿಗೆ ಅರ್ಹತೆಯಿದ್ದರೂ, ಯಾವುದೇ ಸ್ಪರ್ಧೆಗಳಿಗೆ ಭಾಗವಹಿಸದಿರುವುದು ನನಗೆ ಬೇಸರ ತಂದಿತ್ತು. ಹಾಗಾಗಿ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದೆ. ಕಳೆದ 4 ತಿಂಗಳಲ್ಲಿ 36 ಪ್ರಶಸ್ತಿ ಬಂದಿದ್ದು, ಇದಕ್ಕೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಕಾರಣಕರ್ತರು ಎಂದು ಶ್ಲಾಘಿಸಿದರು.
![ಬಿಎಂಟಿಸಿ ರಜತ ಮಹೋತ್ಸವ](https://etvbharatimages.akamaized.net/etvbharat/prod-images/26-09-2023/kn-bng-09-bmtc-25years-of-celebration-7210969_26092023001030_2609f_1695667230_810.jpg)