ಬೆಂಗಳೂರು: ಐಪಿಎಲ್ ಬೆಟ್ಟಿಂಗ್ ಆಡಲು ಹಣವಿಲ್ಲದ ಯುವಕರಿಬ್ಬರು ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡಿ ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಮನು ಹಾಗೂ ಕೀರ್ತಿ ಬಂಧಿತ ಆರೋಪಿಗಳು 19 ವರ್ಷಕ್ಕೆ ಕ್ರಿಕೆಟ್ ಬೆಟ್ಟಿಂಗ್ಗೆ ದಾಸರಾಗಿದ್ದ ಇವರು ಬೆಟ್ಟಿಂಗ್ನಲ್ಲಿ ಸಾಕಷ್ಟು ಹಣ ಸೋತಿದ್ದರು. ಮುಂದೆ ಬೆಟ್ಟಿಂಗ್ ಆಡಲು ಹಣವಿಲ್ಲದ ಕಾರಣ ಸರಗಳ್ಳತನ ಮಾಡಲು ಮುಂದಾಗಿದ್ದರು. ಯೂಟ್ಯೂಬ್ನಲ್ಲಿ ಸರಗಳ್ಳತನದ ವಿಡಿಯೋಗಳನ್ನು ನೋಡಿ ಅದರಂತೆ ರಸ್ತೆ ಬದಿ ಒಂಟಿಯಾಗಿ ಓಡಾಡುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಇವರು, ನಗರದ ಈಶಾನ್ಯ ವಿಭಾಗದಲ್ಲಿ ಸತತ ಸರಗಳ್ಳತನ ಮಾಡಿ ಇದೀಗ ಚಿಕ್ಕಜಾಲ ಪೊಲೀಸರ ಅತಿಥಿಗಳಾಗಿದ್ದಾರೆ.
ಚಿಕ್ಕಜಾಲ ಠಾಣಾ ವ್ಯಾಪ್ತಿಯಲ್ಲಿ ಪುಷ್ಪ ಎಂಬುವವರ 35 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗುತ್ತಿದ್ದರು. ಈ ವೇಳೆ ರೌಂಡ್ಸ್ನಲ್ಲಿ ಇದ್ದ ಇನ್ಸ್ಪೆಕ್ಟರ್ ಯಶವಂತ್ ಖದೀಮರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಆರೋಪಿಗಳ ವಿಚಾರಣೆ ಮಾಡಿದಾಗ ಐಪಿಎಲ್ ಬೆಟ್ಟಿಂಗ್ನಲ್ಲಿ ಹಣ ಕಳೆದುಕೊಂಡು ಹಣ ಕೊಡುವ ಸಲುವಾಗಿ ಸರಗಳ್ಳತನ ಮಾಡುತ್ತಿದ್ದು, ಬಳಿಕ ಬಂದ ಹಣದಲ್ಲಿ ಬೆಟ್ಟಿಂಗ್ ಹಾಗೂ ಮೋಜು ಮಸ್ತಿ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಈಶಾನ್ಯ ವಿಭಾಗದ ಯಲಹಂಕ, ಸಂಪಿಗೆಹಳ್ಳಿ ಹಾಗೂ ಚಿಕ್ಕಜಾಲ ಪೊಲೀಸರು ಕಾರ್ಯಾಚಣೆ ಮಾಡಿ ಸುಮಾರು 66 ಪ್ರಕರಣಗಳನ್ನು ಭೇದಿಸಿದ್ದು, ಅದರಲ್ಲಿ 41 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಅದರಲ್ಲಿ ರಾಬರಿ, ಮನೆಗಳ್ಳತನ, ಡಕಾಯಿತಿ ಮಾಡಿದ್ದ ಆರೋಪಿಗಳು ಇದ್ದು, ಅವರಿಂದ ಸುಮಾರು 84 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ನಗರ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಈಶಾನ್ಯ ವಿಭಾಗದ ಪೊಲೀಸರಿಗೆ ತಲೆನೋವಾಗಿದ್ದ ಸುಮಾರು 21 ಮಂದಿ ಆರೋಪಿಗಳನ್ನು ಬಂಧನ ಮಾಡಿದ್ದು, ಸದ್ಯದ ಮಟ್ಟಿಗೆ ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.