ಬೆಂಗಳೂರು: ಇವತ್ತಿನ ಸುಪ್ರೀಂಕೋರ್ಟ್ ತೀರ್ಪು ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ ನಮಗೆ ಆಶ್ಚರ್ಯ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಮಾರ ಕೃಪಾ ಅತಿಥಿಗೃಹಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾವು ಸರ್ಕಾರ ಉಳಿಸುವ ಹೋರಾಟಕ್ಕೆ ಸಜ್ಜಾಗಿದ್ದೇವೆ. ಶಾಸಕರ ಅನರ್ಹತೆ ಕುರಿತು ಸ್ಪೀಕರ್ ಮುಂದೆ ಪಿಟಿಷನ್ ಇದೆ. ರಾಜ್ಯಪಾಲರ ಮುಂದಿರುವ ನಮ್ಮ ಪಿಟಿಷನ್ಗೂ ಇಂದಿನ ಸುಪ್ರೀಂ ತೀರ್ಪಿಗೂ ಸಂಬಂಧ ಇಲ್ಲ.ರಾಜೀನಾಮೆ ಅಂಗೀಕಾರ ಮಾಡುವುದಕ್ಕೆ ಮುಂಚೆ ಅವರು ರಾಜ್ಯಪಾಲರ ಬಳಿ ಹೋಗಿದ್ದಾರೆ. ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿದ್ದಾರೆ. ಇದರಿಂದಲೇ ಅತೃಪ್ತ ಶಾಸಕರ ಹುನ್ನಾರ ಏನು ಎಂದು ತಿಳಿಯುತ್ತೆ. ಹಾಗಾಗಿ ಅವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಸಿಎಂ ಬದಲಾದ್ರೆ ಸರ್ಕಾರ ಉಳಿಯುತ್ತೆ ಅನ್ನೋದು ಕೇವಲ ಊಹಾಪೋಹ. ಆ ತರ ಯಾವುದೇ ಪ್ರಸ್ತಾವ ಇಲ್ಲ. ಸದನಕ್ಕೆ ಹಾಜರಾಗುವುದು ಬಿಡುವುದು ಅತೃಪ್ತ ಶಾಸಕರಿಗೆ ಬಿಟ್ಟದ್ದು ಎಂದು ಸುಪ್ರೀಂ ಹೇಳಿದೆ. ಆದ್ರೆ, ಇಂದಿನ ಸುಪ್ರೀಂಕೋರ್ಟ್ ತೀರ್ಪಿನಿಂದ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದರು. ಬಿಜೆಪಿ ನಾಯಕರಿಗೆ ಬೇಕಾಗಿರೋದು ಬಹುಮತದಲ್ಲಿ ಗೆಲ್ಲೋದಷ್ಟೆ. ಶಾಸಕರ ಅನರ್ಹತೆ ಬಗ್ಗೆ ಬಿಜೆಪಿ ತಲೆಕೆಡಿಸಿಕೊಂಡಿಲ್ಲ. ಸುಪ್ರೀಂಕೋರ್ಟ್ ತೀರ್ಪು ಸ್ಪೀಕರ್ ಅವರ ಸಾರ್ವಭೌಮತ್ವ ಎತ್ತಿ ಹಿಡಿದಿದೆ. ಸುಪ್ರೀಂಕೋರ್ಟ್ ತೀರ್ಪು ಶಾಸಕಾಂಗ ವ್ಯವಸ್ತೆಯಲ್ಲಿ ಹಸ್ತಕ್ಷೇಪ ಮಾಡಿದಂತಿದೆ.10ನೇ ಶೆಡ್ಯೂಲ್ ಪ್ರಕಾರ ವಿಪ್ ಜಾರಿ ಮಾಡೋ ಅಧಿಕಾರ ನಮಗಿದೆ ಎಂದರು.
ನಮ್ಮ ಶಾಸಕರಿಗೆ ನಾವು ವಿಪ್ ಜಾರಿ ಮಾಡ್ತೀವಿ. ಸುಪ್ರೀಂಕೋರ್ಟ್ ಶಾಸಕರನ್ನು ಬರುವಂತೆ ಬಲವಂತ ಮಾಡದಂತೆ ಹೇಳಿದೆ. ಸುಪ್ರೀಂತೀರ್ಪು ಅವರಿಗೆ ಸಹಾಯ ಮಾಡುವ ರೀತಿ ಇದೆ. ಇಂತಹವರಿಗೆ ರಕ್ಷಣೆ ಕೊಡೋ ಕೆಲಸ ಸುಪ್ರೀಂ ಮಾಡಬಾರದು. ಶಾಸಕಾಂಗದ ಹಕ್ಕುಗಳ ಬಗ್ಗೆ ಚರ್ಚೆ ಆಗಬೇಕು. ನ್ಯಾಯಾಂಗ ನಮ್ಮ ಕೆಲಸದಲ್ಲಿ ಮಧ್ಯ ಪ್ರವೇಶ ಮಾಡುವ ಹಾಗೇ ಇಲ್ಲ.ಸಂವಿಧಾನ ಶಾಸಕಾಂಗಕ್ಕೆ ಕೊಟ್ಟಿರುವ ಕೆಲಸ ಮೊಟಕುಗೊಳಿಸುವ ಕೆಲಸ ಆಗಬಾರದು ಎಂದರು.
ಇನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಮಾತನಾಡಿ, ವಿಶ್ವಾಸಮತದಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ. ಸುಪ್ರೀಂಕೋರ್ಟ್ ಸ್ಪೀಕರ್ ತೀರ್ಮಾನಕ್ಕೆ ಬಿಟ್ಟಿದೆ. ಕೋರ್ಟ್ ತೀರ್ಪು ಸ್ವಲ್ಪ ಗೊಂದಲಮಯವಾಗಿದೆ. ಸುಪ್ರೀಂಕೋರ್ಟ್ ಶಾಸಕಾಂಗ ವ್ಯವಸ್ಥೆಯಲ್ಲಿ ಮಧ್ಯ ಪ್ರವೇಶಿಸುವಂತೆ ತೀರ್ಪನ್ನು ನೀಡಿದೆ. ಈ ತೀರ್ಪು ರಾಜ್ಯದಲ್ಲಷ್ಟೇ ಅಲ್ಲ ದೇಶದ ಶಾಸಕಾಂಗ ವ್ಯವಸ್ಥೆಗೆ ಮಧ್ಯ ಪ್ರವೇಶಿಸುವಂತಾಗಿದೆ. ಪಕ್ಷ ಭೇದವಿಲ್ಲದೇ ಇದರ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ. ವಿಪ್ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಯಾರೂ ಕೂಡ ವಾದ ಮಂಡನೆ ಮಾಡಿರಲಿಲ್ಲ ಎಂದರು.