ಬೆಂಗಳೂರು : ವಾಯು ವಿಹಾರಕ್ಕೆಂದು ತೆರಳಿದ್ದ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಪತ್ನಿಯನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿರುವ ದುಷ್ಕರ್ಮಿಗಳು ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.
ಸಿದ್ದಾಪುರ ನಿವಾಸಿ ಸುಶೀಲಮ್ಮ ಎಂಬುವರು ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವೈಟ್ಫೀಲ್ಡ್ನ ಸಿದ್ದಾಪುರದಲ್ಲಿ ನೆಲೆಸಿರುವ ಸುಶೀಲಮ್ಮ ಗೃಹಿಣಿಯಾಗಿದ್ದು, ಪತಿ ಮುನಿನಾರಾಯಣಪ್ಪ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಎಸ್ಪಿ ಕಚೇರಿಯಲ್ಲಿ ಎಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶುಕ್ರವಾರ ರಾತ್ರಿ 10 ಗಂಟೆಯಲ್ಲಿ ಊಟ ಮುಗಿಸಿ ವಾಯು ವಿಹಾರಕ್ಕೆ ತೆರಳಿದ್ದರು.
ಈ ವೇಳೆ ಸುಶೀಲಮ್ಮ ಅವರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು, ಕುತ್ತಿಗೆಯಲ್ಲಿದ್ದ ಚಿನ್ನದ ಸರಕ್ಕೆ ಕೈಹಾಕಿ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸರವು ಒಟ್ಟು 90 ಗ್ರಾಂ ಬೆಲೆ ಬಾಳುವಷ್ಟಿದ್ದು, ಅದನ್ನು ಕೀಳುವ ವೇಳೆ ಎರಡು ತುಂಡುಗಳಾಗಿದೆ. ಇದರಲ್ಲಿ ಖದೀಮರು 53 ಗ್ರಾಂ ನಷ್ಟು ಸರವನ್ನು ದೋಚಿದ್ದಾರೆ.
ಓದಿ: ಕುಡಿಯುವ ನೀರಿಗಾಗಿ ನಡೆದ ಜಗಳ ಮಹಿಳೆ ಕೊಲೆಯಲ್ಲಿ ಅಂತ್ಯ
ಈ ಕುರಿತು ಪ್ರಕರಣ ದಾಖಲಿಸಿ, ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸಲಾಗಿದೆ. ಆರೋಪಿಗಳ ಮುಖಚಹರೆಯ ಗುರುತು ಪತ್ತೆಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.