ಬೆಂಗಳೂರು: ದೇಶದಲ್ಲಿ ಲಾಕ್ಡೌನ್ ಸಡಿಲಿಕೆ ನಂತರವೂ ಜವಳಿ ಉದ್ಯಮ ಚೇತರಿಕೆ ಆಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ ಎಂದು ಜವಳಿ ಉದ್ಯಮಿದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಜನರು ಲಾಕ್ಡೌನ್ ಸಡಿಲಿಕೆ ನಂತರವೂ ಮನೆಯಿಂದ ಹೊರ ತೆರಳುತ್ತಿಲ್ಲ, ಜನರೇ ಮಾರುಕಟ್ಟೆಗೆ ಬಾರದಿದ್ದರೆ ವ್ಯಾಪಾರ ಹೇಗೆ ಆಗುತ್ತದೆ ಎಂದು ಸಗಟು ಜವಳಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಹೇಳಿದರು. ಸುಮಾರು ಒಂದು ತಿಂಗಳಿಂದ ಅಂಗಡಿಗಳು ಈಗಾಗಲೇ ತೆರೆದಿದ್ದು, ಶೇಕಡಾ 25ರಷ್ಟು ವ್ಯಾಪಾರವು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇವರು ಹೇಳುವ ಪ್ರಕಾರ ಮಹಿಳೆಯರು ಮನೆಯಿಂದ ಆಚೆ ಬಂದರೆ ಜವಳಿ ಉದ್ಯಮ ಸುಧಾರಣೆಯಾಗುತ್ತದೆ. ಮಹಿಳೆಯರೇ ಹೆಚ್ಚಾಗಿ ಜವಳಿ ಖರೀದಿಗೆ ಮುಂದಾಗುತ್ತಾರೆ ಎಂದರು. ಇದರ ಜೊತೆಗೆ ಬಾಡಿಗೆ, ವಿದ್ಯುತ್ ಬಿಲ್ ಕಟ್ಟಲೇ ಬೇಕಾದ ಪರಿಸ್ಥಿತಿ ಉದ್ಯಮಿದಾರರಿಗೆ ಮುಂದಾಗಿದೆ ಹೀಗಾದರೆ ಜವಳಿ ಉದ್ಯಮದ ಭವಿಷ್ಯ ಕಷ್ಟವಿದೆ ಎಂದು ತಿಳಿಸಿದರು.
ಪ್ರಸ್ತುತವಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದ್ದು, ಜನರು ಅನಾವಶ್ಯಕವಾಗಿ ವಸ್ತುಗಳ ಖರೀದಿ ಮಾಡುತ್ತಿಲ್ಲ. ನಿತ್ಯ ಸರಾಸರಿ 25 ರಿಂದ 30 ಸಾವಿರ ರೂಪಾಯಿ ವಹಿವಾಟು ಮಾಡುವ ಅಂಗಡಿಗಳು ಇದೀಗ ಸಾವಿರ ಅಥವಾ 2 ಸಾವಿರ ರೂಪಾಯಿ ವಹಿವಾಟು ನಡೆಸುತ್ತಿವೆ.