ಬೆಂಗಳೂರು: ಕೇಂದ್ರ ಸರ್ಕಾರದ ಸ್ವಚ್ಛತಾ ಪಕ್ವಾಡ ಅಭಿಯಾನದ ಅಂಗವಾಗಿ ಬೆಂಗಳೂರಿನಲ್ಲಿ ಬಿ. ಪ್ಯಾಕ್ ಸಂಸ್ಥೆ ವತಿಯಿಂದ ಸ್ವಚ್ಛತಾ ಅಭಿಯಾನ ನಡೆಸಲಾಯಿತು.
ಬಿ.ಪ್ಯಾಕ್ನ ಹಲವು ಸದಸ್ಯರು ಬೆಂಗಳೂರಿನ ಲಾಲ್ ಬಾಗ್ ರಸ್ತೆಯ ಪಾಸ್ ಪೋರ್ಟ್ ಕಚೇರಿ ಬಳಿಯ ರಸ್ತೆ ಬದಿಯಲ್ಲಿ ಎಸೆಯಲಾಗಿದ್ದ ಕಸವನ್ನು ತೆಗೆದು, ಆ ಸ್ಥಳದಲ್ಲಿ ಕೆಂಪು ಬಣ್ಣ ಬಳಿದು ಸ್ವಚ್ಛತೆ ಕಾಪಾಡಿಕೊಳ್ಳುವ ಮಾಹಿತಿ ಬರಹಗಳನ್ನು ಬರೆದರು.
ಯುವಕರು ಹಾಗೂ ಮಹಿಳೆಯರು ಅಭಿಯಾನದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅಭಿಯಾನದ ಸಂಯೋಜಕ ನವೀನ್ ಪ್ರಕಾಶ್, ಜನರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.ನಂತರ ಘನ ತ್ಯಾಜ್ಯ ಹಾಗೂ ಹಸಿ ತ್ಯಾಜ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಬೀದಿ ನಾಟಕ ಮಾಡಲಾಯಿತು.