ಬೆಂಗಳೂರು : ಪಕ್ಷ ವಿರೋಧಿ ಹೇಳಿಕೆ, ಪಕ್ಷಕ್ಕೆ ಮುಜುಗರವನ್ನುಂಟು ಮಾಡುವುದನ್ನು ಹೈಕಮಾಂಡ್ ಸಹಿಸುವುದಿಲ್ಲ. ಕ್ರಮದ ವಿಚಾರದಲ್ಲಿ ವಿಳಂಬವಾಗಿರಬಹುದು. ಆದರೆ, ಇನ್ನು ಕೆಲವೇ ದಿನಗಳಲ್ಲಿ ಕ್ರಮ ಖಚಿತವಾಗಿ ಜರುಗಿಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಪ್ರವಾಸದ ವೇಳೆ ಅರುಣ್ ಸಿಂಗ್ ಅವರು ಯಾರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ, ಯಾರು ಅಭಿವೃದ್ಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬದೆಲ್ಲವನ್ನೂ ಕೂಡ ತಿಳಿದುಕೊಂಡು ಹೋಗಿದ್ದಾರೆ. ಕೊರೊನಾ ಎರಡನೇ ಅಲೆಯ ನಿಯಂತ್ರಣದಲ್ಲಿ ನಮ್ಮ ನಾಯಕರಿದ್ದರು, ನಂತರ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ತೊಡಗಿಕೊಂಡಿದ್ದರು. ಹಾಗಾಗಿ, ಈ ಕಡೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ ಎಂದರು.
ಯಾರು ಪಕ್ಷವಿರೋಧಿ ಚಟುವಟಿಕೆ ಮತ್ತು ಪಕ್ಷಕ್ಕೆ ಮುಜುಗರವಾಗುವ ಕೆಲಸ ಮಾಡಿದ್ದಾರೆ ಕೆಲವೇ ದಿನಗಳಲ್ಲಿ ಅದಕ್ಕೆ ಸರಿಯಾದ ಕ್ರಮವನ್ನು ನಮ್ಮ ಹೈಕಮಾಂಡ್ ತೆಗೆದುಕೊಳ್ಳಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ. ನಾಲ್ಕು ದಿನ ತಡವಾಗಿದ್ದಕ್ಕೆ ಪಕ್ಷದ ವಿರುದ್ಧ ಏನು ಬೇಕಾದರೂ ಮಾತನಾಡಬಹುದು, ಏನು ಬೇಕಾದರೂ ಮಾತನಾಡಿದರೂ ನಡೆಯುತ್ತದೆ ಎಂದು ತಿಳಿದುಕೊಂಡರೆ ಅದು ತಪ್ಪಾಗಲಿದೆ. ಹೈಕಮಾಂಡ್ ಅತ್ಯಂತ ಬಲಿಷ್ಠವಾಗಿದೆ. ಪಕ್ಷ ವಿರುದ್ಧ ಚಟುವಟಿಕೆ ನಡೆಸಿರುವವರ ವಿರುದ್ಧ ಆದಷ್ಟು ಬೇಗ ಕ್ರಮವನ್ನು ತೆಗೆದುಕೊಳ್ಳಲಿದೆ ಎನ್ನುವ ಸಂಪೂರ್ಣ ವಿಶ್ವಾಸವಿದೆ ಎಂದರು.
ಪರವೂ ಹೇಳಿಕೆ ನೀಡುತ್ತಿದ್ದಾರೆ, ವಿರುದ್ಧವೂ ಹೇಳಿಕೆ ನೀಡುತ್ತಿದ್ದಾರೆ. ಇದು ಗಮನಕ್ಕೆ ಬಂದಿದೆ. ಶಾಸಕರು ನಮ್ಮವರೇ, ನಮ್ಮ ಪಕ್ಷದಿಂದಲೇ ಗೆದ್ದು ಬಂದಿದ್ದಾರೆ, ನಮ್ಮ ಶಾಸಕರ ಬಗ್ಗೆ ನಾವು ಬಹಳ ಹಗುರವಾಗಿ ಮಾತನಾಡುವುದಿಲ್ಲ. ಬಾಯಿ ನಮ್ಮದೇ, ಹಲ್ಲು ನಮ್ಮದೇ, ನಾಲಿಗೆಯೂ ನಮ್ಮದೇ. ಇದನ್ನು ನಮ್ಮ ಪಕ್ಷದಲ್ಲಿರುವ ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಸೂಚ್ಯವಾಗಿ ಪರ-ವಿರೋಧ ಇರುವ ನಾಯಕರಿಗೆ ತಿಳಿ ಹೇಳಿದರು.
ಹದ್ದುಮೀರಿ ಯಾರು ಮಾತನಾಡುತ್ತಿದ್ದಾರೋ ಕೆಲವೇ ದಿನಗಳಲ್ಲಿ ಕೇಂದ್ರದ ನಾಯಕರು ಕ್ರಮ ತೆಗೆದುಕೊಳ್ಳಲಿದ್ದಾರೆ. ಎಲ್ಲರೂ ಏನು ಹೇಳಿಕೆ ಕೊಡುತ್ತಾರೆ ಎನ್ನುವುದನ್ನು ಕಳಿಸಿ ಕೊಡಿ ಎಂದು ನಮಗೆ ಸೂಚನೆ ಕೊಟ್ಟಿದ್ದಾರೆ. ಅದರಂತೆ ನಾವು ಕಳಿಸಿಕೊಡುತ್ತಿದ್ದೇವೆ. ಪಕ್ಷಕ್ಕೆ ಮುಜುಗರ ಆಗಬಾರದು ಎಂದು ಪರ-ವಿರೋಧ ಎರಡು ಕಡೆ ಹೇಳಿಕೆ ನೀಡುವವರಿಗೂ ಅನ್ವಯವಾಗಲಿದೆ ಎಂದರು.
ಅರುಣ್ ಸಿಂಗ್ ಬಂದಿದ್ದೆ ದೆಹಲಿಗೆ ಯಾರು ಬರಬಾರದು ಎನ್ನುವ ಕಾರಣಕ್ಕೆ. ಆದರೂ ದೆಹಲಿಗೆ ಹೋಗುವ ಕುರಿತು ಹೇಳಿಕೆ ಬರುತ್ತಿದೆ. ಈ ಬಗ್ಗೆ ಮುಂದಿನ ನಿರ್ಧಾರವನ್ನು ನಮ್ಮ ಪಕ್ಷದ ನಾಯಕರು ತೆಗೆದುಕೊಳ್ಳಲಿದ್ದಾರೆ ಎಂದರು.