ಬೆಂಗಳೂರು: ಟ್ರೋಲ್ ಮಾಡಲು ರೋಹಿಣಿ ಸಿಂಧೂರಿ ಬಾಡಿಗೆ ಟ್ರೋಲರ್ಸ್ ಬಳಕೆ ಮಾಡಿದ್ದಾರೆ ಎನ್ನುವ ಐಪಿಎಸ್ ಅಧಿಕಾರಿ ಡಿ. ರೂಪಾ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗುತ್ತಿದೆ. ರೋಹಿಣಿ ಸಿಂಧೂರಿ ಹಾಗೂ ಅವರ ಪತಿ ಬಾಡಿಗೆ ಟ್ರೋಲರ್ಗಳ ನೆರವು ಪಡೆದು ವಿರೋಧಿಗಳನ್ನು ಹತ್ತಿಕ್ಕುತ್ತಾರೆ ಎಂದು ಡಿ.ರೂಪಾ ಆರೋಪಿಸಿದ್ದರು.
‘ವಿರೋಧಿಗಳನ್ನು ಹತ್ತಿಕ್ಕಲು ಬಾಡಿಗೆ ಟ್ರೋಲರ್ಸ್’
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ರೋಹಿಣಿ ಸಿಂಧೂರಿ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ವಿರೋಧಿಗಳ ಬಾಯಿ ಮುಚ್ಚಿಸಲು ಬಾಡಿಗೆ ಟ್ರೋಲರ್ಗಳನ್ನು ಬಳಸುತ್ತಾರೆ ಎಂದು ಕರಕುಶಲ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಗಂಭೀರವಾಗಿ ದೂರಿದ್ದರು.
- https://m.facebook.com/story.php?story_fbid=3705391159566439&id=100002867757921
‘ರೋಹಿಣಿ ವಿರುದ್ಧ ಪೋಸ್ಟ್ ಹಾಕಬೇಡಿ’
ಈ ವಿಷಯ ಸದ್ಯಕ್ಕೆ ಎಲ್ಲೆಡೆ ಸಾಕಷ್ಟು ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬರು ಜೂನ್ 25 ರಂದು ರೂಪಾರೊಂದಿಗೆ ವಾಟ್ಸ್ಆ್ಯಪ್ ಚಾಟ್ ಮೂಲಕ ನಡೆಸಿದ ಸಂಭಾಷಣೆಯನ್ನು ಜುಲೈ 3ರಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವ್ಯಕ್ತಿಯು ತಮ್ಮ ಸಂಬಂಧಿಯೊಬ್ಬರಿಗೆ ಕೋವಿಡ್ ಚಿಕಿತ್ಸೆಗಾಗಿ ರೂಪಾ ಬೆಡ್ ಕೊಡಿಸಿದ ವಿಷಯವನ್ನು ಪ್ರಸ್ತಾಪಿಸಿ ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ.
ಜೊತೆಗೆ ತಾನು ಸಾರ್ವಜನಿಕ ಸಂಪರ್ಕ (ಪಿಆರ್) ಏಜೆನ್ಸಿಯೊಂದರ ಮಾಜಿ ಉದ್ಯೋಗಿ ಎಂದೂ ಹೇಳಿದ್ದಾನೆ. ಮಾತನಾಡುತ್ತಾ, ನೀವು ರೋಹಿಣಿ ಸಿಂಧೂರಿ ವಿರುದ್ಧ ಪೋಸ್ಟ್ಗಳನ್ನು ಹಾಕಬೇಡಿ ಎಂದು ರೂಪಾರಿಗೆ ಹೇಳಿದ್ದಾರೆ. ಯಾಕೆ ಎಂದು ರೂಪಾ ಪ್ರಶ್ನಿಸಿದಾಗ ರೋಹಿಣಿ ಅವರನ್ನು ಟೀಕಿಸುವವರ ವಿರುದ್ಧದ ಪ್ರತಿಕ್ರಿಯೆಗಳು ಬಾಡಿಗೆ ಟ್ರೋಲರ್ಗಳಿಂದ ಬರುತ್ತವೆ. ನಾನು ಕೂಡ ಆ ಸಂಸ್ಥೆಯಲ್ಲಿ ಕೆಲ ಕಾಲ ಕೆಲಸ ಮಾಡಿದ್ದೇನೆ. ಈಗಲೂ ಬಳಕೆಯಾಗುತ್ತಿರುವುದಾಗಿ ನನ್ನ ಸ್ನೇಹಿತರು ತಿಳಿಸಿದ್ದಾರೆ ಎಂದು ಆ ವ್ಯಕ್ತಿ ಹೇಳಿದ್ದಾರೆ ಎನ್ನಲಾಗಿದೆ.
‘ಸುಮ್ಮನಿದ್ದು ಬಿಡಿ ಮೇಡಂ’
ರೋಹಿಣಿ ಸಿಂಧೂರಿ ಮತ್ತು ಅವರ ಪತಿ ಬಾಡಿಗೆ ಟ್ರೋಲರ್ಗಳ ನೆರವು ಪಡೆದು ವಿರೋಧಿಗಳನ್ನು ಮಣಿಸುತ್ತಾರೆ ಎಂದು ಆ ವ್ಯಕ್ತಿ ಹೇಳಿರುವ ಮಾತನ್ನು ರೂಪಾ ಬಹಿರಂಗಪಡಿಸಿದ್ದಾರೆ. ನಾನು ಒಂದು ಪಿ.ಆರ್ ಏಜೆನ್ಸಿಯಲ್ಲಿ ಹಿಂದೆ ಉದ್ಯೋಗಿಯಾಗಿದ್ದೆ. ಸಿಂಧೂರಿ ಪತಿ ಒಂದು ವರ್ಷದಿಂದ ಏಜೆನ್ಸಿಯ ಸೇವೆ ಪಡೆಯುತ್ತಿದ್ದಾರೆ. ವಿರೋಧಿಗಳ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ.
ರೋಹಿಣಿ ವಿರುದ್ಧ ಮಾತನಾಡುವವರ ವಿರುದ್ಧ ಕೆಟ್ಟದಾಗಿ ದಾಳಿ ಮಾಡಿಸುತ್ತಿದ್ದಾರೆ. ನೀವು ತಂಟೆಗೆ ಹೋಗಬೇಡಿ, ಸುಮ್ಮನಿದ್ದು ಬಿಡಿ ಮೇಡಂ ಎಂದು ಆ ವ್ಯಕ್ತಿ ಸಲಹೆ ನೀಡಿದ್ದಾರೆ. ಮಾತಿನ ಮಧ್ಯೆ ರೂಪಾ ಸತ್ಯ ಹೇಳೋಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕು ಎಂದು ಹೇಳಿದ್ದಾರೆ. ಅದಕ್ಕೆ ವ್ಯಕ್ತಿಯು ತನಗೆ ಕನ್ನಡ ಭಾಷೆ ಬರೋಲ್ಲ ಎಂದು ಹೇಳಿದ್ದು, ನಾನು ಕೂಡ ಆಂಧ್ರಪ್ರದೇಶದವನು ಎಂದು ಉತ್ತರಿಸಿದ್ದಾರೆ.
‘ರೋಹಿಣಿ ಪತಿ ಪಿಆರ್ ಏಜೆನ್ಸಿಯ ಸೇವೆ ಪಡೆಯುತ್ತಿದ್ದಾರೆ’
ಮುಂದುವರಿದು ಬಾಡಿಗೆ ಟ್ರೋಲರ್ಗಳಿಗೆ ನೀಡುತ್ತಿರುವ ಹಣದ ಬಗ್ಗೆ ಮಾಹಿತಿ ನೀಡುವಂತೆ ರೂಪಾ ಕೇಳಿದ್ದಾರೆ. ಆಗ ವ್ಯಕ್ತಿಯು ಆ ವಿಷಯ ಗೊತ್ತಿಲ್ಲ, ರೋಹಿಣಿ ಸಿಂಧೂರಿ ಗಂಡ ಒಂದು ವರ್ಷದಿಂದಲೂ ಪಿ.ಆರ್ ಏಜೆನ್ಸಿಯ ಸೇವೆ ಪಡೆಯುತ್ತಿದ್ದಾರೆ ಎಂದು ವ್ಯಕ್ತಿ ಹೇಳಿದ್ದಾರೆ.
ಸತ್ಯ ಹೇಳೋಕೆ ಯಾವ ದೊಣ್ಣೆನಾಯಕನ ಅಪ್ಪಣೆ ಬೇಕು?
ಈ ಸಂಭಾಷಣೆ ಜೂನ್ 25ರಂದು ನಡೆದಿದೆ. ನನಗೆ ಹೆಚ್ಚಾಗಿ ತಿಳಿಯದ ಈ ವ್ಯಕ್ತಿ ಹೇಳಿದ್ದು ನಿಜವಾದರೆ, ನಾನು ಹಾಕುವ ನನ್ನ ಅಭಿಪ್ರಾಯಕ್ಕೆ ನಕಾರಾತ್ಮಕವಾಗಿ, ಅನಾಗರಿಕ ರೀತಿಯಲ್ಲಿ ಪ್ರತಿಕ್ರಿಯಿಸಿದರೆ ಅದರ ಹಿಂದೆ ಅಂಥವರ ವಿಕೃತ ಮನೋಭಾವ ಎದ್ದು ತೋರುತ್ತದೆ.
ಸತ್ಯ ಹೇಳೋಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಒಬ್ಬ ಅಧಿಕಾರಿಯ ಪರ ಕೆಲಸ ಮಾಡುತ್ತಾ, ಇನ್ನೊಬ್ಬ ಅಧಿಕಾರಿಯ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು ತಪ್ಪು ಎಂದು ಬಾಡಿಗೆ ಟ್ರೋಲರ್ಗಳಿಗೆ ಗೊತ್ತಿಲ್ಲವೇ. ನಾಯಿ ಬೊಗಳಿದರೆ ಅಂಬಾರಿ ಹೋಗುವುದು ನಿಲ್ಲುವುದಿಲ್ಲ. ಹಾಗೆಯೇ ಈ ವ್ಯಕ್ತಿ ಹೇಳಿದ ವಿಷಯ ಸತ್ಯವೇ ಎನ್ನುವುದು ತನಿಖೆ ಆಗಬೇಕು ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಮೌದ್ಗಿಲ್ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕರೆ ಸ್ವೀಕರಿಸದ ಸಿಂಧೂರಿ
ಈ ಬಗ್ಗೆ ಪ್ರತಿಕ್ರಿಯೆ ಕೇಳಲು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯರಿಗೆ ಕರೆ ಮಾಡಿದರೂ ಅವರು ಸ್ವೀಕರಿಸಲಿಲ್ಲ.
ಇದನ್ನೂ ಓದಿ:'BJP ಅಧಿಕಾರಕ್ಕೆ ತರುವುದೇ ಗುರಿ': ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಮುನ್ನ ಅಣ್ಣಾಮಲೈ ಪ್ರತಿಜ್ಞೆ