ಬೆಂಗಳೂರು: ವಿನೋದ್ ಮತ್ತು ರೌಡಿ ಶೀಟರ್ ಪ್ರಶಾಂತ್ನನ್ನ ಕೊಲೆಮಾಡಿದ್ದ 17 ಆರೋಪಿಗಳಿಗೆ ಬೆಂಗಳೂರು ಪೊಲೀಸರು ಕೈಕೋಳ ತೊಡಿಸಿದ್ದಾರೆ.
ಕಳೆದ ಫೆಬ್ರವರಿ 27ರ ರಾತ್ರಿ ಬಾಣಸವಾಡಿಯ ಕಲ್ಯಾಣ ನಗರದಲ್ಲಿ ಪ್ರಶಾಂತ್ ಎಂಬ ರೌಡಿಶೀಟರ್ನನ್ನು ಶಿವರಾಜ್ ಮತ್ತು ಲೋಕೇಶ್ ಟೀಂ ಭೀಕರವಾಗಿ ಕೊಂದಿತ್ತು. ಮಾರತ್ಹಳ್ಳಿ ರೌಡಿಶೀಟರ್ ಪ್ರಶಾಂತ್ ಅಣ್ಣನನ್ನು ಇದೇ ಆರೋಪಿಗಳು ನೀರಿನ ವ್ಯವಹಾರದ ವೈಷಮ್ಯ ಬೆಳೆದು ಮೂರ್ನಾಲ್ಕು ವರ್ಷಗಳ ಹಿಂದೆ ಕೊಂದಿದ್ದರು ಎನ್ನಲಾಗ್ತಿದೆ.
ಅಣ್ಣ ವಿನೋದ್ನನ್ನ ಕೊಂದಿದ್ದ ಶಿವರಾಜ್ ಮತ್ತು ಲೋಕೇಶ್ ಅವರನ್ನ ಮುಗಿಸುವುದಾಗಿ ಪ್ರಶಾಂತ್ ಪ್ರತಿಜ್ಞೆ ಮಾಡಿದ್ದ. ಈಶ್ವರಪ್ಪ ಪಿ.ಎ. ಅಪಹರಣ ಕೇಸ್ನಲ್ಲಿ ಜೈಲಿಗೆ ಹೋಗಿ ಬಂದ ನಂತರ ಪ್ರಶಾಂತ್ ಹವಾ ಮತ್ತಷ್ಟು ಹೆಚ್ಚಾಗಿತ್ತು. ಇವನನ್ನು ಹೀಗೆ ಬಿಟ್ಟರೆ ನಮಗೆ ಉಳಿಗಾಲವಿಲ್ಲ ಎಂದು ಶಿವರಾಜ್ ಮತ್ತು ಲೋಕೇಶ್ ಗ್ಯಾಂಗ್ ಪ್ರಶಾಂತ್ನನ್ನು ಮುಗಿಸಿದ್ದರು.
ಇದೀಗ ಕೊಲೆ ಆರೋಪಿಗಳಾದ ಲೋಕೇಶ್, ಸ್ಟಾಲೀನ್, ಪ್ರವೀಣ್, ಬಸವರಾಜ್, ಕಿಶೋರ್ ಸೇರಿದಂತೆ ಒಟ್ಟು 17 ಜನ ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.
ಕೊಲೆಯಾದ ಎರಡು ದಿನಗಳಲ್ಲಿ ಮಾರತ್ಹಳ್ಳಿ ಇನ್ಸ್ಪೆಕ್ಟರ್ ಪ್ರಮುಖ ಆರೋಪಿ ಲೋಕೇಶ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಮಾರತ್ಹಳ್ಳಿ, ಹೆಚ್ಎಎಲ್ ಮತ್ತು ಬಾಣಸವಾಡಿ ಪೊಲೀಸರು ಒಟ್ಟು 17 ಜನ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆದರೆ ಪ್ರಮುಖ ಆರೋಪಿ ಶಿವರಾಜ್ ತಲೆಮರೆಸಿಕೊಂಡಿದ್ದು, ಅವನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.