ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೊನಾ ನಿಯಂತ್ರಣಕ್ಕೆ ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದೆ. ಮತ್ತೊಂದೆಡೆ ರಾಜ್ಯದಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ಮೊದಲ ಸ್ಥಾನದಲ್ಲಿದೆ ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ.
ತೀವ್ರ ಉಸಿರಾಟ ತೊಂದರೆ ಹೊಂದಿರುವ ರೋಗಿಗೆ ಎಸ್ಎಆರ್ಐ(SARI) ಎಂದು ಹೇಳಲಾಗುತ್ತದೆ. ಈ ಪ್ರಕರಣಗಳು ನಗರದಲ್ಲೇ ಅಧಿಕವಾಗಿದ್ದು, ಏ.07ರಿಂದ ದಿನಕ್ಕೆ ಒಂದರಿಂದ ಎರಡು ಪ್ರಕರಣಗಳು ದಾಖಲಾಗುತ್ತಿವೆಯಂತೆ. ಕೊರೊನಾ ಸೋಂಕು ಹೆಚ್ಚಾದಾಗ ಈ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳತ್ತದೆ. ಇನ್ನು, ಆರೋಗ್ಯ ಇಲಾಖೆಯ ವರದಿ ಪ್ರಕಾರ ಸುಮಾರು 26 ಕೇಸ್ಗಳು ದಾಖಲಾಗಿವೆ.
ಜಿಲ್ಲಾವಾರು ಎಸ್ಎಆರ್ಐ ಪ್ರಕರಣಗಳ ವಿವರ:
- ಬೆಂಗಳೂರು -13
- ಕಲಬುರಗಿ -6
- ಮೈಸೂರು - 2
- ಉತ್ತರ ಕನ್ನಡ -1
- ವಿಯಪುರ -1
- ದಕ್ಷಿಣ ಕನ್ನಡ -1
ಈ ರೀತಿಯ ಸಮಸ್ಯೆ ಎದುರಿಸುವವರು ಆದಷ್ಟು ಎಚ್ಚರಿಕೆಯಿಂದಿರಬೇಕು. 60 ವರ್ಷ ಮೇಲ್ಪಟ್ಟವರೇ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇಂತಹವರು ಎಲ್ಲೂ ಹೊರಗಡೆ ಓಡಾಡದೆ ಮನೆಯಲ್ಲಿದ್ದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಅನಾರೋಗ್ಯ ಸಮಸ್ಯೆ ಕಂಡು ಬಂದಲ್ಲಿ, ಕೂಡಲೇ ಹತ್ತಿರದ ಆಸ್ಪತ್ರೆಗಳಿಗೆ ತೆರಳುವಂತೆ ವೈದ್ಯರು ಸೂಚಿಸಿದ್ದಾರೆ.