ಬೆಂಗಳೂರು: ಅನ್ಲಾಕ್ ಆದ ಬಳಿಕ ಅಪರಾಧ ಚಟುವಟಿಕೆಗಳು ಚುರುಕುಗೊಂಡಿದ್ದು, ಜಿದ್ದಿಗಾಗಿ ಹಾಡಹಾಗಲೇ ಮಾರಕಾಸ್ತ್ರಗಳಿಂದ ಭೀಕರ ಹತ್ಯೆ ಪ್ರಕರಣಗಳಲ್ಲಿ ನಿರಾತಂಕವಾಗಿ ರೌಡಿಗಳು ಭಾಗಿಯಾಗುತ್ತಿದ್ದಾರೆ. ಮತ್ತೊಂದೆಡೆ ಗಾಂಜಾ ನಶೆಯಲ್ಲಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಗೂಂಡಾಗಿರಿಯಲ್ಲಿ ಸಕ್ರಿಯವಾಗಿದ್ದಾರೆ.
ಈ ಘಟನೆಗಳ ಬಳಿಕ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದರೂ ರೌಡಿ ಚಟುವಟಿಕೆಗಳನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಇತ್ತೀಚೆಗೆ ನಗರದಲ್ಲಿ ಹೆಚ್ಚಾದ ರೌಡಿಶೀಟರ್ಗಳ ಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹಳೆ ದ್ವೇಷ, ಹಣಕಾಸಿನ ಕಾರಣಗಳಿಗಾಗಿ ಹಾಡಹಾಗಲೇ ರೌಡಿಗಳ ಭೀಕರ ಕೊಲೆ, ಕೊಲೆ ಯತ್ನ ಘಟನೆಗಳು ನಡೆದರೆ ಆಯಾ ಠಾಣೆಯ ಇನ್ಸ್ಪೆಕ್ಟರ್ಗಳೇ ಹೊಣೆಗಾರರಾಗಲಿದ್ದು, ಇದನ್ನು ನಿಯಂತ್ರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ರೌಡಿಗಳ ನಿಗಾವಹಿಸಲು ಇಬ್ಬರು ಪಿಎಸ್ಐ ನೇತೃತ್ವದ ತಂಡ ರಚನೆ:
ನಗರದಲ್ಲಿ ನಡೆಯುವ ರೌಡಿ ಕಾಳಗ ನಿಯಂತ್ರಿಸಲು ಆಯಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಇಬ್ಬರು ಸಬ್ ಇನ್ಸ್ಪೆಕ್ಟರ್ ಹಾಗೂ ಕ್ರೈಂ ಸಿಬ್ಬಂದಿ ಒಳಗೊಂಡ ಪ್ರತ್ಯೇಕ ತಂಡ ನಿಯೋಜನೆ ಮಾಡಲಾಗಿದೆ.
ಅವರವರ ಠಾಣಾ ವ್ಯಾಪ್ತಿಯಲ್ಲಿ ಸಕ್ರಿಯವಾಗಿರುವ ರೌಡಿಗಳೆಷ್ಟು? ರೌಡಿಗಳು ಯಾವ ವಿಳಾಸದಲ್ಲಿದ್ದಾರೆ? ಏನ್ ಕೆಲಸ ಮಾಡುತ್ತಿದ್ದಾರೆ? ಎಲ್ಲಿ ಕೆಲಸ ಮಾಡುತ್ತಿದ್ದಾರೆ? ಯಾರು ಕೆಲಸ ನೀಡಿದವರು? ಅವರ ಹಿನ್ನೆಲೆ ಏನು? ಎಂಬ ಮಾಹಿತಿ ವಿಶೇಷ ತಂಡ ಕಲೆ ಹಾಕಲಿದೆ.
ರೌಡಿಶೀಟರ್ ಸಂಪೂರ್ಣ ಮಾಹಿತಿ ಇನ್ಸ್ಪೆಕ್ಟರ್ ಮುಖಾಂತರ ಆಯಾ ವಿಭಾಗದ ಡಿಸಿಪಿಗಳಿಗೆ ರವಾನೆಯಾಗಲಿದೆ. ರೌಡಿಗಳ ಜೊತೆಗೆ ಅವರ ವಿರೋಧಿ ಬಣದವರ ಕುರಿತಾಗಿ ಮಾಹಿತಿ ಸಂಗ್ರಹಿಸಬೇಕಿದೆ.
ಅಪರಾಧ ಎಸಗಿ ಜೈಲಿಗೆ ಹೋಗಿರುವ ಪ್ರತಿ ರೌಡಿಶೀಟರ್ ಬಗ್ಗೆ ಫೈಲ್ ರೆಡಿ ಮಾಡಲಾಗುತ್ತಿದೆ. ಜೈಲಿನಲ್ಲಿರುವ ಸುಮಾರು 1500 ರೌಡಿಶೀಟರ್ಗಳ ಮಾಹಿತಿ ಈಗಾಗಲೇ ಸಂಗ್ರಹಿಸಲಾಗಿದೆ. ಈ ಮೂಲಕ ಶತಾಯಗತಾಯ ರೌಡಿಗಳ ಚಟುವಟಿಕೆ ಕಡಿಮೆ ಮಾಡಲು ಬೆಂಗಳೂರು ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ.
ಅಪರಾಧ ತಗ್ಗಿಸಲು ನಗರ ಪೊಲೀಸ್ ಆಯುಕ್ತ ಕೈಗೊಂಡ ಕ್ರಮಗಳೇನು?
- ಏಕಕಾಲದಲ್ಲಿ ಎಲ್ಲಾ ವಲಯಗಳಲ್ಲಿರುವ 2 ಸಾವಿರ ರೌಡಿಶೀಟರ್ಗಳ ನಿವಾಸಗಳ ಮೇಲೆ ದಾಳಿ, ಮಾರಕಾಸ್ತ್ರ ಜಪ್ತಿ
- ರೌಡಿ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ
- ಅಕ್ರಮವಾಗಿ ನಗರದಲ್ಲಿ ನೆಲೆಯೂರಿದ ವಿದೇಶಿ ಪ್ರಜೆಗಳ ಮೇಲೆ ದಾಳಿ
- ಡ್ರಗ್ಸ್ ದಂಧೆಯಲ್ಲಿ ಭಾಗಿಯಾದ ವಿದೇಶಿ ಪ್ರಜೆಗಳ ವಿರುದ್ಧ ಎನ್ಡಿಪಿಎಸ್ ಕಾಯ್ದೆ ದಾಖಲು, ಗಡಿಪಾರಿಗೆ ಸೂಚನೆ
- ಜೈಲಿನಲ್ಲಿ ಕೂತು ಅಪರಾಧಕ್ಕೆ ಸ್ಕೆಚ್ ಹಾಕುವ ನಟೋರಿಯಸ್ ರೌಡಿಗಳನ್ನು ಬೇರೆ ಜೈಲುಗಳಿಗೆ ಸ್ಥಳಾಂತರಕ್ಕೆ ಚಿಂತನೆ