ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸಂಸದ ಬಚ್ಚೇಗೌಡ ಹಾಗೂ ಎಂಟಿಬಿ ನಾಗರಾಜ್ ಪರಸ್ಪರ ಮುಖಾಮುಖಿಯಾಗಿದ್ದಾರೆ, ಆದರೆ, ಒಬ್ಬರ ಮುಖ ಒಬ್ಬರು ನೋಡದೇ ಮೌನವಾಗಿ ಮುನ್ನಡೆದಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಸಂಸದ ಬಚ್ಚೇಗೌಡ ಭೇಟಿ ನೀಡಿ, ಹುಟ್ಟುಹಬ್ಬದ ಶುಭ ಕೋರಿದರು. ಉಪ ಚುನಾವಣೆಯಲ್ಲಿ ಪುತ್ರನ ಸ್ಪರ್ಧೆ ತಪ್ಪಿಸಲು ವಿಫಲವಾದ ನಂತರ ತುಸು ಅಂತರದಲ್ಲೇ ಇದ್ದ ಬಚ್ಚೇಗೌಡ ಇಂದು ಸಿಎಂ ಜೊತೆ ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದರು.
ಈ ವೇಳೆ ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಕೂಡ ಸಿಎಂ ನಿವಾಸಕ್ಕೆ ಆಗಮಿಸಿದರು. ಎಂಟಿಬಿ ಬರುತ್ತಿದ್ದಂತೆ, ಬಚ್ಚೇಗೌಡ ಸಿಎಂ ನಿವಾಸದಿಂದ ನಿರ್ಗಮಿಸಿದರು. ಬಚ್ಚೇಗೌಡ ನಿರ್ಗಮನದ ನಂತರ ಸಿಎಂ ಜೊತೆ ಎಂಟಿಬಿ ನಾಗರಾಜ್ ಮಾತುಕತೆ ನಡೆಸಿದರು. ನಿನ್ನೆ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಶುಭ ಕೋರಿದ್ದರು. ಬಜೆಟ್ ನಂತರ ಸಂಪುಟ ವಿಸ್ತರಣೆ ಕುರಿತು ದೆಹಲಿಯಲ್ಲಿ ಹೇಳಿಕೆ ನೀಡಿದ್ದ ಸಂಬಂಧ ಮಾತುಕತೆ ನಡೆಸಿದರು ಎನ್ನಲಾಗಿದೆ.