ಬೆಂಗಳೂರು: ವಸತಿ ಸಚಿವ ವಿ. ಸೋಮಣ್ಣ ಶಟಲ್ ಕಾಕ್ ಆಡುವ ಮೂಲಕ ದಿ.ಅನಂತ್ ಕುಮಾರ್ ಕ್ರೀಡಾ ಸಂಕೀರ್ಣಕ್ಕೆ ಚಾಲನೆ ನೀಡಿದ್ದಾರೆ.
ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಕೆ.ಜಿ.ಎಸ್. ವಾರ್ಡ್ ಸಂಖ್ಯೆ 125ರಲ್ಲಿ 6 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮಾಜಿ ಕೇಂದ್ರ ಸಚಿವ ದಿ. ಅನಂತಕುಮಾರ್ ಕ್ರೀಡಾ ಸಂಕೀರ್ಣ ಕಟ್ಟಡ, 1.05 ಕೋಟಿ ವೆಚ್ಚದ ವಿವಿಧೋದ್ದೇಶ ಕಟ್ಟಡ ಸಂಕೀರ್ಣ, ಮಾರೇನಹಳ್ಳಿ ವಾರ್ಡ್ನಲ್ಲಿ 2.90ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಕ್ರೀಡಾ ಸಂಕೀರ್ಣ ಹಾಗೂ ನಚಿಕೇತ ಉದ್ಯಾನವನವನ್ನು ವಸತಿ ಸಚಿವ ವಿ ಸೋಮಣ್ಣ ಉದ್ಘಾಟಿಸಿದ್ದಾರೆ.
ಬಿಬಿಎಂಪಿ ಹಾಗೂ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿಯಲ್ಲಿ ಈ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಅನಂತ್ ಕುಮಾರ್ ಕ್ರೀಡಾ ಸಂಕೀರ್ಣ ಸುಮಾರು 440.00 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಇದರ ನೆಲ ಮಹಡಿಯಲ್ಲಿ ಕೆಜಿಎಸ್ ಗ್ರಂಥಾಲಯ, ಯೋಗ ಶಾಲೆ ಇದೆ. ಮೊದಲ ಮಹಡಿಯಲ್ಲಿ ಆತ್ಯಾಧುನಿಕ ಮಾದರಿಯ ವ್ಯಾಯಾಮ ಶಾಲೆ ಹಾಗೂ ಎರಡನೇ ಮಹಡಿಯಲ್ಲಿ ಶಟಲ್ ಕಾಕ್ ಕೋರ್ಟ್ ಇದೆ.
ಇನ್ನು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಕ್ರೀಡಾ ಸಂಕೀರ್ಣದಲ್ಲಿ ಹೊರಾಂಗಣ ವ್ಯಾಯಮ ಸೌಲಭ್ಯಗಳು, ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಸೇರಿದಂತೆ ಇನ್ನಿತರ ಒಳಾಂಗಣ ಕ್ರೀಡೆಗಳ ಅಂಕಣಗಳನ್ನು ಹೊಂದಿವೆ.