ಬೆಂಗಳೂರು: ಮೆಟ್ರೋ ಪಿಲ್ಲರ್ ದುರಂತದಲ್ಲಿ ತಾಯಿ-ಮಗು ಸಾವನ್ನಪ್ಪಿದ ಪ್ರಕರಣದ ತನಿಖೆ ಮುಂದುವರೆದಿದೆ. ಇಂದೂ ಸಹ ಗೋವಿಂದಪುರ ಠಾಣಾ ಪೊಲೀಸರಿಂದ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ ಹಾಗೂ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಶನ್ ಲಿಮಿಟೆಡ್ (ಬಿಎಂಆರ್ಸಿಎಲ್) ಅಧಿಕಾರಿಗಳ ವಿಚಾರಣೆ ಮುಂದುವರೆದಿದೆ. ಪ್ರಕರಣದ ಕುರಿತು ಮಾತನಾಡಿರುವ ಪೂರ್ವ ವಿಭಾಗದ ಹೆಚ್ಚುವರಿ ಆಯುಕ್ತ ಎಂ.ಚಂದ್ರಶೇಖರ್, 'ಈಗಾಗಲೇ ಬಿಎಂಆರ್ಸಿಎಲ್ ಆಡಳಿತ ಮಂಡಳಿ ಐಐಎಸ್ಸಿಯಿಂದ ಘಟನಾ ಸ್ಥಳದ ಪರಿಶೀಲನೆ ನಡೆಸಿ ವರದಿ ಕೇಳಿದೆ.
ಪೊಲೀಸ್ ಇಲಾಖೆಯಿಂದ ಪ್ರತ್ಯೇಕವಾಗಿ ಐಐಟಿ ಪ್ರಾಧ್ಯಾಪಕರ ತಂಡದಿಂದ ಪರಿಶೀಲನೆ ಮಾಡಿಸಲಾಗಿದ್ದು, ನಿನ್ನೆಯಷ್ಟೇ ಇಬ್ಬರು ಪ್ರಾಧ್ಯಾಪಕರು ಸ್ಥಳ ಪರಿಶೀಲನೆ ಕೈಗೊಂಡು ಶೀಘ್ರದಲ್ಲೇ ವರದಿ ನೀಡುವುದಾಗಿ ತಿಳಿಸಿ ತೆರಳಿದ್ದಾರೆ. ಐಐಟಿ ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದಿದ್ದಾರೆ.
ಪ್ರಕರಣದ ಹಿನ್ನೆಲೆ: ಜನವರಿ 10ರಂದು ಬೆಳಿಗ್ಗೆ ಹೆಚ್ಬಿಆರ್ ಲೇಔಟಿನ ರಿಂಗ್ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತದಿಂದ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ತೇಜಸ್ವಿನಿ ಹಾಗೂ ಅವರ ಮೂರು ವರ್ಷದ ಗಂಡು ಮಗು ವಿಹಾನ್ ಸಾವನ್ನಪ್ಪಿದ್ದರು. ಬೈಕಿನಲ್ಲಿದ್ದ ತೇಜಸ್ವಿನಿ ಪತಿ ಲೋಹಿತ್ ಕುಮಾರ್ ಹಾಗೂ ಮತ್ತೊಂದು ಹೆಣ್ಣು ಮಗು ಗಂಭೀರ ಗಾಯಗಳೊಂದಿಗೆ ಪಾರಾಗಿದ್ದರು. ಬಳಿಕ ಲೋಹಿತ್ ನೀಡಿದ ದೂರಿನನ್ವಯ ಬಿಎಂಆರ್ಸಿಎಲ್ ಹಾಗೂ ಪಿಲ್ಲರ್ ನಿರ್ಮಾಣದ ಹೊಣೆಗಾರಿಕೆ ಹೊತ್ತಿದ್ದ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿಯ ಎಂಟು ಜನ ಅಧಿಕಾರಿಗಳ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಿಚಾರಣೆಗೆ ಹಾಜರಾದ ಅಧಿಕಾರಿಗಳು: ಘಟನೆ ಬಳಿಕ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಗಾಯಳು ಲೋಹಿತ್ ಪ್ರಕರಣವನ್ನು ದಾಖಲಿಸಿದ್ದರು. ಪ್ರಕರಣ ದಾಖಲಿಸಕೊಂಡಿದ್ದ ಪೊಲೀಸರು ಸೈಟ್ ಇಂಜಿನಿಯರ್, ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಬಿಎಂಆರ್ಸಿಎಲ್ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿ ಮಾಡಿದ್ದರು. ಅದರಂತೆ ಆರೋಪ ಎದುರಿಸುತ್ತಿರುವ ಐವರು ಅಧಿಕಾರಿಗಳು ಪೊಲೀಸ್ ನೋಟಿಸ್ ಬಂದಾಕ್ಷಣ ಗೋವಿಂದಪುರ, ಬಾಣಸವಾಡಿ, ಕೆಜಿ ಹಳ್ಳಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿಚಾರಣೆಗೆ ಹಾಜರಾಗಿದ್ದಾರು. ನಾಗಾರ್ಜುನಾ ಕನ್ಸ್ಟ್ರಕ್ಷನ್ ಕಂಪನಿಯ ಪ್ರಭಾಕರ್, ವಿಕಾಸ್ ಸಿಂಗ್, ಲಕ್ಷ್ಮೀಪತಿ, ಬಿಎಂಆರ್ಸಿಎಲ್ ಡೆಪ್ಯೂಟಿ ಚೀಫ್ ವೆಂಕಟೇಶ್ ಶೆಟ್ಟಿ, ಎಕ್ಸಿಕ್ಯೂಟಿವ್ ಎಂಜಿನಿಯರ್ ಮಹೇಶ್ ಬೆಂಡೆಕರಿ ಎಂಬುವವರನ್ನು ವಿಚಾರಣೆಗೊಳಪಡಿಸಲಾಗಿತ್ತು.
ಮೂವರು ಇಂಜಿನಿಯರ್ಗಳ ಸಸ್ಪೆಂಡ್ : ಮೆಟ್ರೋ ಪಿಲ್ಲರ್ ದುರಂತದ ಹಿನ್ನೆಲೆ ಮೂವರು ಇಂಜಿನಿಯರ್ಗಳ ಮೇಲೆ ಕ್ರಮ ಕೈಗೊಂಡ ಬಿಎಂಆರ್ಸಿಎಲ್, ಇಂಜಿನಿಯರ್ಗಳ ಅಮಾನತು ಮಾಡಿತ್ತು. ಪ್ರಭಾವಿ ಉಪ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಸೇರಿದಂತೆ ಸೈಟ್ ಇಂಜಿನಿಯರ್ನ್ನು ಬಿಎಂಆರ್ಸಿಎಲ್ ಅಮಾನತು ಮಾಡಿತ್ತು. ಅಲ್ಲದೇ ಈ ಬಗ್ಗೆ ಸ್ವತಂತ್ರ್ಯವಾಗಿ ತನಿಖೆ ನಡೆಸಿ ವರದಿ ನೀಡಲು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ಗೆ ಸೂಚಿಸಲಾಗಿತ್ತು.
ಪ್ರಕರಣದ ಕುರಿತು ಸಿಎಂ ಸಭೆ: ಮೆಟ್ರೋ ಪಿಲ್ಲರ್ ಕುಸಿತ ಪ್ರಕಣದ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಗಳವಾರ ರಾತ್ರಿ ನಮ್ಮ ಮೆಟ್ರೋದ ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮತ್ತು ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಅಮಾನತುಗೊಳಿಸುವಂತೆ ಆದೇಶ ನೀಡಿದ್ದರು. ಸಿಎಂ ಆದೇಶದ ಮೇರೆಗೆ ಪರಿಶೀಲನೆ ನಡೆಸಿದ ಮೆಟ್ರೋ ನಿಗಮದ ಆಡಳಿತ ಮಂಡಳಿಯು 3 ಜನ ಇಂಜಿನಿಯರ್ಗಳನ್ನು ಸೇವೆಯಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸಿದೆ.
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ: ಪೊಲೀಸ್ ವಿಚಾರಣೆಗೆ ಹಾಜರಾದ ಬಿಎಂಆರ್ಸಿಎಲ್ ಅಧಿಕಾರಿಗಳು
ಇದನ್ನೂ ಓದಿ: ಮೆಟ್ರೋ ಪಿಲ್ಲರ್ ದುರಂತ: ಮೂವರು ಇಂಜಿನಿಯರ್ಗಳು ಸಸ್ಪೆಂಡ್.. ತನಿಖೆ ನಡೆಸಿ ವರದಿ ನೀಡಲು ಐಐಎಸ್ಸಿಗೆ ಮನವಿ