ಬೆಂಗಳೂರು : ಬೆಳಕಿಲ್ಲದ ಅಡುಗೆ ಕೋಣೆ, ಸ್ವಚ್ಛತೆ ಇಲ್ಲದ ಸಪ್ಲೇಯರ್ಸ್, ಈ ಕ್ಯಾಂಟಿನ್ ಗುಣಮಟ್ಟವೋ ಒಂದು ಸಾರಿ ಬಂದವರು ಮತ್ತೊಮ್ಮೆ ತಿರುಗಿನೋಡದ ಪರಿಸ್ಥಿತಿ. ಈ ಕಾರಣಕ್ಕಾಗಿ ಈ ಕ್ಯಾಂಟೀನ್ನ್ನು ದಯವಿಟ್ಟು ಮುಚ್ಚಿ, ಸುಸಜ್ಜಿತ ಹೋಟೆಲ್ ತೆರೆಯುವಂತೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಮನವಿ ಮಾಡಿದೆ.
ನಗರದ ಇತರೆ ಹೋಟೆಲ್, ರೆಸ್ಟೋರೆಂಟ್, ಮಾಲ್ ಗಳ ಆಹಾರ ಮಳಿಗೆಗಳಿಗೆ ದಿಢೀರ್ ಭೇಟಿ ನೀಡಿ ಸಾವಿರಾರು ರುಪಾಯಿ ದಂಡ ಹಾಕುವ ಆರೋಗ್ಯಾಧಿಕಾರಿಗಳಿಗೆ ತಮ್ಮ ಕೇಂದ್ರ ಕಚೇರಿಯ ಕ್ಯಾಂಟಿನ್ ಕಣ್ಣಿಗೆ ಕಂಡೇ ಇಲ್ಲ ಅನಿಸುತ್ತೆ. ಗಾಳಿ, ಬೆಳಕಿನ ಸೌಲಭ್ಯ ಇಲ್ಲ. ಕಿಚನ್ ರೂಂ, ಸ್ವಚ್ಛತೆ ಇಲ್ಲದ ಸಪ್ಲಯಿಂಗ್ ಕೋಣೆ, ಇನ್ನು ಕೆಲಸ ಮಾಡುವ ಸಿಬ್ಬಂದಿಗಳ ತಲೆಗೆ ಕ್ಯಾಪ್ ಇಲ್ಲ, ಹೀಗೆ ಸ್ವಚ್ಛತೆ ದೃಷ್ಟಿಯಲ್ಲಿ ನೋಡಿದರೆ ಈ ಕ್ಯಾಂಟಿನ್ ನಡೆಯಲು ಸಾಧ್ಯವೇ ಇಲ್ಲ. ಆದ್ರೂ 1998 ರಿಂದ ಈವರೆಗೂ, ಸುಮಾರು ಇಪ್ಪತ್ತು ವರ್ಷಗಳಿಂದಲೂ ಲಿಂಗರಾಜು ಮಾಲೀಕತ್ವದ ಈ ಕ್ಯಾಂಟಿನ್ ಮುಂದುವರೆದುಕೊಂಡು ಬಂದಿದೆ.
ಬೇರೆ ಎಷ್ಟೇ ಜನ ಕ್ಯಾಂಟೀನ್ ನಡೆಸಲು ಮುಂದೆ ಬಂದ್ರೂ, ಲಿಂಗರಾಜು ಪ್ರಭಾವದ ಮುಂದೆ ಯಾರ ಬೇಳೆಯೂ ಬೆಂದಿಲ್ಲ ಎನ್ನಲಾಗುತ್ತಿದೆ. ಈ ಕ್ಯಾಂಟಿನ್ ನಲ್ಲಿ ಊಟ ಮಾಡಲಾಗದೆ ಪಾಲಿಕೆಯ ಸಿಬ್ಬಂದಿಗಳು, ಅಧಿಕಾರಿಗಳು, ಗುತ್ತಿಗೆದಾರರು, ಪಾಲಿಕೆಗೆ ಬರುವ ಸಾರ್ವಜನಿಕರು, ಬಿಬಿಎಂಪಿ ಹೊರಗಿನ ಹೋಟೆಲ್ ಗಳಿಗೆ ಹೋಗ್ತಾರೆ ಹೊರತು, ಈ ಕ್ಯಾಂಟಿನ್ ಗೆ ಅಪ್ಪಿತಪ್ಪಿಯೂ ಬರೋದಿಲ್ಲ.
ಇದರಿಂದ ನೌಕರರ, ಸಿಬ್ಬಂದಿಗಳ ಕಾರ್ಯಕ್ಷಮತೆ ಕಡಿಮೆ ಆಗುತ್ತೆ. ನಗರದ ಹೈಕೋರ್ಟ್, ವಿಧಾನಸೌಧ, ಎಮ್ ಎಸ್ ಬಿಲ್ಡಿಂಗ್ ಗಳಲ್ಲಿ ಉತ್ತಮವಾದ ಹೋಟೆಲ್ ಗಳಿವೆ. ಹೀಗಾಗಿ ಬಿಬಿಎಂಪಿಯಲ್ಲೂ ಉತ್ತಮ ಗುಣಮಟ್ಟದ ಹೋಟೆಲ್ ಪಾಲಿಕೆ ಆವರಣದಲ್ಲಿ ಆರಂಭಿಸೋದ್ರಿಂದ ಬಿಬಿಎಂಪಿಗೆ ಬರೋ ಎಲ್ಲರಿಗೂ ಅನುಕೂಲವಾಗುತ್ತದೆ. ಈ ಹಿನ್ನಲೆ ಮಹಾಪೌರರು ಹೈಟೆಕ್ ಹೋಟೆಲ್ ನಿರ್ಮಾಣಕ್ಕೆ ಮುಂದಾಗಬೇಕೆಂದು ಸಂಘದ ಅಧ್ಯಕ್ಷ ಅಮೃತ್ ರಾಜ್ ಮೇಯರ್ ಗೆ ಪತ್ರ ಬರೆದಿದ್ದಾರೆ.