ಬೆಂಗಳೂರು: ಕಾನೂನು ಉಲ್ಲಂಘನೆ ಮಾಡಿ ಚಿನ್ನಾಭರಣ ವ್ಯವಹಾರ ನಡೆಸುವ, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಎಂಎಲ್ಸಿ ರಮೇಶ್ ಬಾಬು ಸಿಎಂಗೆ ಪತ್ರ ಬರೆದಿದ್ದಾರೆ. ಕೆಲ ಫೈನಾನ್ಸ್ ಸಂಸ್ಥೆಗಳು ಪ್ರತಿ ತಿಂಗಳು 10 ಸಾವಿರಕ್ಕೂ ಹೆಚ್ಚು ಗ್ರಾಹಕರ ಚಿನ್ನಾಭರಣವನ್ನು ಸಾರ್ವಜನಿಕ ನೋಟಿಸ್ ನೆಪವೊಡ್ಡಿ ಮುಟ್ಟುಗೋಲು ಹಾಕುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಬಹುತೇಕ ಪ್ರಕರಣದಲ್ಲಿ ಸಾಲ ಪಡೆದವರಿಗೆ ವೈಯ್ಯಕ್ತಿಕವಾಗಿ ನೋಟಿಸ್ ನೀಡುವುದಿಲ್ಲ. ಸಾಲ ಮರುಪಾವತಿ ಮಾಡಲು ಹೋದರೆ ಚಿನ್ನಾಭರಣ ವಾಪಸು ಮಾಡುವುದಿಲ್ಲ. ಈ ರೀತಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಕಾನೂನು ಉಲ್ಲಂಘಿಸಿ ಬಡವರ ಚಿನ್ನಾಭರಣ ದೋಚುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ರಿಸರ್ವ್ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯ ಅನುಮತಿ ಇಲ್ಲದೆ ಅಕ್ರಮವಾಗಿ ಚಿನ್ನಾಭರಣದ ಸಾಲ ನೀಡುತ್ತಿರುವ ಸಂಸ್ಥೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.