ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೊಟ್ಟ ಮಾತು ತಪ್ಪಲ್ಲ. ಅವರು ಖಂಡಿತವಾಗಿ ನನಗೆ ಸಚಿವ ಸ್ಥಾನ ನೀಡಲಿದ್ದಾರೆ. ಸಂಪುಟ ವಿಸ್ತರಣೆಗೆ ನನ್ನಿಂದ ಯಾವುದೇ ಆತುರವಿಲ್ಲ, ವಿಸ್ತರಣೆ ಮಾಡುವವರೆಗೂ ಕಾಯುತ್ತೇನೆ ಎಂದು ನೂತನ ಶಾಸಕ ಮುನಿರತ್ನ ತಿಳಿಸಿದ್ದಾರೆ.
ಬಿಜೆಪಿ ಕಚೇರಿ ಜಗನ್ನಾಥ ಭವನಕ್ಕೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿಯಾದರು. ಚುನಾವಣೆ ಫಲಿತಾಂಶ ಬಂದ ನಂತರ ಕಟೀಲ್ ಅವರನ್ನು ಭೇಟಿಯಾಗಿರದ ಮುನಿರತ್ನ ಇಂದು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಕೆಲಕಾಲ ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿ ಆಶೀರ್ವಾದ ಪಡೆದಿದ್ದೇನೆ. ಅರುಣ್ ಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಇಲ್ಲಿ ಪಕ್ಷವನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸಂಘಟನೆ ಮಾಡಿ ಪಕ್ಷವನ್ನು ನಮ್ಮ ಕ್ಷೇತ್ರದಲ್ಲಿ ಬೆಳೆಸುವ ಭರವಸೆಯನ್ನು ಅವರಿಗೆ ನೀಡಿದ್ದೇನೆ. ಬಿಜೆಪಿ ಶಾಸಕನಾಗಿ ಪ್ರಾಮಾಣಿಕವಾಗಿ ಸೇವೆ ಮಾಡುವುದಾಗಿ ನಮ್ಮ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದರು.
ಸಂಪುಟ ವಿಸ್ತರಣೆ ಕುರಿತು ವರಿಷ್ಠರು ಏನು ಬೇಕಾದರೂ ತೀರ್ಮಾನ ಮಾಡಬಹುದು. ಆರ್. ಶಂಕರ್, ಎಂಟಿಬಿ ನಾಗರಾಜ್ ಬಗ್ಗೆ ನಾನು ಏನೂ ಹೇಳುವುದಿಲ್ಲ. ಎಲ್ಲರೂ ಒಟ್ಟಾಗಿ ಬಂದಿದ್ದರೂ ಕೂಡ ನಾನು ಪಕ್ಷದ ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಮಂತ್ರಿ ಮಂಡಲ ವಿಸ್ತರಣೆ ಅಥವಾ ಪುನರ್ರಚನೆ ಮಾಡುವುದು ಮುಖ್ಯಮಂತ್ರಿಗಳು, ವರಿಷ್ಠರಿಗೆ ಸಂಬಂಧಪಟ್ಟ ವಿಚಾರ. ಅವರು ಯಾವಾಗ ವಿಸ್ತರಣೆ ಮಾಡುತ್ತಾರೋ ಅಲ್ಲಿಯವರೆಗೂ ಕಾಯುತ್ತೇನೆ. ನಮ್ಮ ನಾಯಕರು ಯಾವುದೇ ಖಾತೆಯನ್ನು ಕೊಟ್ಟರೂ ಕೂಡ ಅದನ್ನು ಒಪ್ಪಿಕೊಳ್ಳುತ್ತೇನೆ. ಸಿಎಂ ಯಡಿಯೂರಪ್ಪ ಕೊಟ್ಟ ಮಾತನ್ನು ತಪ್ಪೋದಿಲ್ಲ, ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿದ್ದಾರೆ, ನನಗೆ ಸಚಿವ ಸ್ಥಾನ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
![munirathna met nalin kumar katil](https://etvbharatimages.akamaized.net/etvbharat/prod-images/9589480_aaa.jpg)
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಗೆಲ್ಲುವ ಕಾರ್ಯತಂತ್ರದ ಕುರಿತು ಪ್ರತಿಕ್ರಿಯೆ ನೀಡಿದ ಮುನಿರತ್ನ, ಚುನಾವಣೆ ಬಂದಾಗ ನಮ್ಮ ಪಕ್ಷದ ಕೆಲಸವನ್ನು ನಾವು ಮಾಡಲಿದ್ದೇವೆ. ಅವರವರ ಪಕ್ಷದ ಕೆಲಸವನ್ನು ಅವರವರು ಮಾಡುತ್ತಾರೆ. ನಾನು ನನ್ನ ಕ್ಷೇತ್ರದ ಬಗ್ಗೆ ಮಾತ್ರ ಚರ್ಚೆ ಮಾಡುತ್ತೇನೆ. ರಾಜ್ಯ, ನಗರ, ಲೋಕಸಭೆ ಬಗ್ಗೆ ನಾನು ಮಾತನಾಡುವುದಿಲ್ಲ, ನಾನು ನನ್ನ ಕ್ಷೇತ್ರಕ್ಕೆ ಸೀಮಿತವಾಗಿ ಮಾತನಾಡುತ್ತೇನೆ ಎಂದರು.