ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಸದ್ದು ಮಾಡಿದ ಹನಿಟ್ರ್ಯಾಪ್ ಪ್ರಕರಣ ಕೊಂಚ ಮಟ್ಟಿಗೆ ಚುನಾವಾಣಾ ಸಂದರ್ಭದಲ್ಲಿ ತಣ್ಣಗಾ ಗಿತ್ತು. ಆದರೆ, ಇದೀಗ ಸಿಸಿಬಿ ಅಧಿಕಾರಿಗಳು ರಾಜಕಾರಣಿಗಳ ಮೇಲೆ ನಡೆದ ಹನಿಟ್ರ್ಯಾಪ್ ಪ್ರಕರಣದ ತನಿಖೆಯನ್ನು ಮತ್ತೆ ಚುರುಕುಗೊಳಿಸಿದ್ದಾರೆ.
ಇಬ್ಬರು ಅನರ್ಹ ಶಾಸಕರು ಸೇರಿ ಬಹಳಷ್ಟು ಶಾಸಕರು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಕೊಂಡಿದ್ದರು. ಓರ್ವ ಶಾಸಕ, ಸಿಸಿಬಿ ಅಧಿಕಾರಿಗಳಿಗೆ ದೂರು ಕೊಟ್ಟ ಹಿನ್ನೆಲೆ ಸಿಸಿಬಿ ಅಧಿಕಾರಿಗಳು ಪ್ರಮುಖ ಆರೋಪಿ ರಘು ಅಲಿಯಾಸ್ ರಾಘವೇಂದ್ರ ಸೇರಿ ಆತನ ಗುಂಪನ್ನು ಬಂಧಿಸಿದ್ದರು. ಸದ್ಯ ಓರ್ವ ಶಾಸಕ ಹನಿಟ್ರ್ಯಾಪ್ನಲ್ಲಿ ಒಳಗಾದ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ಹಾಗೂ ಆರೋಪಿ ರಘು ಅಲಿಯಾಸ್ ರಾಘವೇಂದ್ರನನ್ನು ಬಂಧಿಸಿದ ನಂತರ ಆತನ ಮನೆಯಲ್ಲಿ ಇನ್ನೂ ಕೆಲ ಶಾಸಕರ ಹನಿಟ್ರ್ಯಾಪ್ ವಿಡಿಯೋ ಕುರಿತ ಸತ್ಯಾಸತ್ಯತೆ ತಿಳಿಯಲು ಎಫ್ಎಸ್ಎಲ್ಗೆ ಆ ವಿಡಿಯೋನ ಸಿಸಿಬಿ ರವಾನೆ ಮಾಡಿತ್ತು.
ಎಫ್ಎಸ್ಎಲ್ ತಂಡ ವರದಿ ನೀಡಿದ ಬಳಿಕ ಇನ್ನಷ್ಟು ವಿಡಿಯೋದ ಅಸಲಿಯತ್ತು ಬಯಲಾಗಲಿದೆ. ನಿಜವಾಗಿಯೂ ಶಾಸಕರು ಹನಿಟ್ರ್ಯಾಪ್ನಲ್ಲಿ ಒಳಗಾಗಿದ್ದಾರಾ ಅಥವಾ ನಕಲಿ ವಿಡಿಯೋ ಮಾಡಿ ಆರೋಪಿಗಳು ಶಾಸಕರನ್ನು ಬೆದರಿಸಿ ಹಣ ಪಡೆದಿದ್ದಾರಾ ಅನ್ನೋದರ ಕುರಿತು ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ಬೇಕಾಗಿದೆ.
ತನಿಖೆಗೆ ಅಗತ್ಯವಿರುವ ಶಾಸಕರ ಹೇಳಿಕೆ ಪಡೆಯಲು ಕೂಡ ಸಿಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ. ಇದರ ಹಿಂದೆ ಬಹಳ ದೊಡ್ಡ ಕೈವಾಡ ಇರುವ ಕಾರಣ ಸಿಸಿಬಿ ಪೊಲೀಸರು ಮತ್ತಷ್ಟು ತನಿಖೆ ಚುರುಕುಗೊಳಿಸಲಿದ್ದಾರೆ.