ಬೆಂಗಳೂರು: ಗುತ್ತಿಗೆದಾರರನನ್ನು ಅಪಹರಿಸಿ ಸುಲಿಗೆ ಮಾಡಿದ ಆರೋಪದಡಿ ಬಂಧನ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ನ ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀಕಾಂತ್ ಲಕ್ಷಣ ಘೋಟ್ನೇಕರ್ ಹಾಗೂ ಇತರರಿಗೆ ನಿರೀಕ್ಷಣಾ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಮಾಜಿ ಎಂಎಲ್ಸಿ ಶ್ರೀಕಾಂತ್ ಎಲ್. ಘೋಟ್ನೇಕರ್, ಅನಿಲ್ ಚವ್ಹಾಣ್, ಶ್ರೀನಿವಾಸ್ ಶ್ರೀಕಾಂತ್ ಘೋಟ್ನೇಕರ್, ಯಶವಂತ್ ಪಟ್ಟೇಕರ್, ಯಲ್ಲಪ್ಪ ಮಳವಂಕರ್ ಸಲ್ಲಿಸಿದ್ದ ಕ್ರಿಮನಲ್ ಅರ್ಜಿಯನ್ನು ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ಪೀಠ ವಜಾಗೊಳಿಸಿ ಆದೇಶಿಸಿದೆ.
ಪೀಠ ತನ್ನ ತೀರ್ಪಿನಲ್ಲಿ ಆರೋಪಿತರ ವಿರುದ್ಧ ಸುಲಿಗೆಯಂತಹ ಗಂಭೀರ ಆರೋಪವಿದೆ. ಹೀಗಾಗಿ, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸದಂತೆ ನ್ಯಾಯಾಲಯ ಆದೇಶಿಸಲಾಗದು. ಆದ್ದರಿಂದ, ಪ್ರಕರಣದ ಮೊದಲ ಆರೋಪಿ ಶ್ರೀಕಾಂತ್ ಘೋಟ್ನೇಕರ್ ಹಾಗೂ ಎರಡನೇ ಆರೋಪಿ ಅನಿಲ್ ಚವ್ಹಾಣ್ ಗೆ ನಿರೀಕ್ಷಣಾ ಜಾಮೀನು ನೀಡಲಾಗದು ಎಂದು ಆದೇಶಿಸಿದೆ.
ಉಳಿದ ಅರ್ಜಿದಾರರಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿರುವ ಪೀಠ, ಆರೋಪಿತರು ತನಿಖಾಧಿಕಾರಿ ಎದುರು ಹಾಜರಾಗಬೇಕು. ತಲಾ 1 ಲಕ್ಷ ಮೊತ್ತದ ಬಾಂಡ್ ನೀಡಬೇಕು. ಸಾಕ್ಷ್ಯ ನಾಶಪಡಿಸಬಾರದು. ಪ್ರತಿ ವಾರಕ್ಕೊಮ್ಮೆ ಠಾಣೆಗೆ ತೆರಳಿ ಸಹಿ ಹಾಕಬೇಕು. ಷರತ್ತು ಉಲ್ಲಂಘಿಸದಲ್ಲಿ ಜಾಮೀನು ರದ್ದಾಗಲಿದೆ ಎಂದು ಸ್ಪಷ್ಟಪಡಿಸಿದೆ.
ಆರೋಪವೇನು ?: 2022ರ ಫೆಬ್ರವರಿ 18ರಂದು ಹಳಿಯಾಳ ಪೊಲೀಸ್ ಠಾಣೆಗೆ ಗುತ್ತಿಗೆದಾರ ವಸಂತ್ ನೀಲಕಂಠ ಚೋರ್ಲೇಕರ್ ಎಂಬುವರು ಕಾಂಗ್ರೆಸ್ ನ ಮಾಜಿ ಎಂಎಲ್ಸಿ ಶ್ರೀಕಾಂತ್ ಎಲ್. ಘೋಟ್ನೇಕರ್ ಹಾಗೂ ಇತರರ ವಿರುದ್ಧ ಅಪಹರಣ, ಸುಲಿಗೆ ಮತ್ತಿತರ ಆರೋಪಗಳ ಅಡಿ ದೂರು ನೀಡಿದ್ದರು. ದೂರಿನಲ್ಲಿ ಕಳೆದ ವರ್ಷ 2021ರಲ್ಲಿ ಹಳಿಯಾಳದ ಕ್ಷತ್ರಿಯ ಮರಾಠ ಭವನದ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ 10 ಲಕ್ಷ ಬಿಡುಗಡೆ ಮಾಡಲಾಗಿತ್ತು.
ಅಭಿವೃದ್ಧಿ ಕಾಮಗಾರಿ ತಾನು ಟೆಂಡರ್ ಮೂಲಕ ಪಡೆದಿದ್ದೆ. ಈ ನಡುವೆ ದೇಣಿಗೆ ಹಣದಿಂದ ಭವನಕ್ಕೆ ಸ್ಲ್ಯಾಬ್ ಹಾಕಿಸಿದ್ದ ಮಾಜಿ ಎಂಎಲ್ಸಿ ಶ್ರೀಕಾಂತ್ ಘೋಟ್ನೇಕರ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಬಿಲ್ ಮಾಡಿಸಿ, ತನ್ನ ಖಾತೆಗೆ ಜಮೆಯಾದ ಬಳಿಕ 3.71 ಲಕ್ಷ ಹಣವನ್ನು ನೀಡುವಂತೆ ಒತ್ತಾಯಿಸಿದರು. ಇದಕ್ಕೆ ನಾನು ಒಪ್ಪಲಿಲ್ಲ.
ಫೆ.18ರಂದು ಭವನಕ್ಕೆ ನನ್ನನ್ನು ಕರೆಸಿ ಅಲ್ಲಿಂದ ಅಪಹರಿಸಿದರು. ನಂತರ ಲಕ್ಷ್ಮಣ ಪ್ಯಾಲೇಸ್ ಲಾಡ್ಜ್ಗೆ ಕರೆದೊಯ್ದು ಬಲವಂತವಾಗಿ ಅನಿಲ್ ಚವ್ಹಾಣ್ ಹೆಸರಿಗೆ 3,33,900 ರೂಪಾಯಿಗೆ ಚೆಕ್ ಬರೆಸಿಕೊಂಡರು. ಬಳಿಕ ಈ ವಿಚಾರವನ್ನು ಹೊರಗೆ ತಿಳಿಸಿದರೆ, ಕೊಲೆ ಮಾಡುವುದಾಗಿ ಬೆದರಿಸಿ, ವನಶ್ರೀ ಸರ್ಕಲ್ ನಲ್ಲಿ ತಂದು ಬಿಟ್ಟುಹೋದರು ಎಂದು ನೀಲಕಂಠ ದೂರಿನಲ್ಲಿ ಆರೋಪಿಸಿದ್ದರು.
ದೂರು ಆಧರಿಸಿ ಹಳಿಯಾಳ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 506, 384, 363 ಹಾಗೂ 149 ಅಡಿ ಆರೋಪಿತರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಬಂಧಿಸುವ ಭೀತಿಗೆ ಒಳಗಾಗಿದ್ದ ಆರೋಪಿತರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಓದಿ: ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ವಿಚಾರ: ತನಿಖೆ ನಡೆಸುವಂತೆ ಪತ್ರ ಬರೆದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ