ಬೆಂಗಳೂರು: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಲಂಚ ನೀಡಿರುವುದಾಗಿ ಏಳು ವರ್ಷಗಳ ಬಳಿಕ ಕೆಎಎಸ್ ಅಧಿಕಾರಿಯಬ್ಬರ ವಿರುದ್ಧ ದೂರು ದಾಖಲಿಸಿರುವುದು ದುರುದ್ದೇಶ ಪೂರ್ವಕವಾಗಿದ್ದು, ಸೇಡಿನ ಪ್ರತೀಕಾರ ಎಂದು ಅಭಿಪ್ರಾಯ ಪಟ್ಟಿರುವ ಹೈಕೋರ್ಟ್ ಪ್ರಕರಣವನ್ನು ರದ್ದುಪಡಿಸಿದೆ.
ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪ್ರಸ್ತುತ ಸಕಾಲ ಮಿಷನ್ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿ ಎಲ್.ಸಿ.ನಾಗರಾಜ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ದೂರುದಾರರು ಏಳು ವರ್ಷಗಳಿಂದ ಈವರೆಗೂ ಸುಮ್ಮನಿದ್ದು, ಘಟನೆಗೆ ಕುರಿತು ಪ್ರತಿಯೊಂದು ಅಂಶವನ್ನು ನಿಖರವಾಗಿ ವಿವರಿಸಿದ್ದಾರೆ. ಸಾಕಷ್ಟು ಅವಕಾಶವಿದ್ದರೂ ಈವರೆಗೂ ದೂರು ನೀಡಿಲ್ಲ.
ನ್ಯಾಯಾಲಯ ಮತ್ತು ಅರೆ ನ್ಯಾಯಾಂಗ ಪ್ರಾಧಿಕಾರದ ಮುಂದೆ ಯಾವ ಕಾರಣಕ್ಕೆ ಹೋಗಿಲ್ಲ ಎಂಬುದಕ್ಕೆ ವಿವರಣೆ ನೀಡಿಲ್ಲ ಎಂದು ಅಭಿಪ್ರಾಯ ಪಟ್ಟು ಪ್ರಕರಣ ರದ್ದುಪಡಿಸಿದೆ. ಸುಪ್ರೀಂಕೋರ್ಟ್ನ ಪ್ರಕರಣವೊಂದನ್ನು ಉಲ್ಲೇಖಿಸಿರುವ ನ್ಯಾಯಪೀಠ, ದೂರು ನೀಡುವುದಕ್ಕೆ ಏಳು ವರ್ಷಗಳ ಬಳಿಕ ಮುಂದಾಗಿರುವ ಕ್ರಮ ದುರುದ್ದೇಶಪೂರಕವಾಗಿ ಕೂಡಿದೆ. 2016ರಿಂದ ಸುಮ್ಮನಿದ್ದು, ಇದೀಗ ಪ್ರಕರಣ ದಾಖಲಿಸಿರುವುದು ಸಂಶಯಕ್ಕೂ ಕಾರಣವಾಗಲಿದೆ. ಜತೆಗೆ, ಅಧಿಕಾರಿಯ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶವಿದೆ. ವೈಯಕ್ತಿಕ ದ್ವೇಷದಿಂದ ದೂರು ನೀಡಿರುವುದಾಗಿ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರು ದಕ್ಷಿಣ ತಾಲೂಕಿನ ವಡ್ಡರಪಾಳ್ಯ ಗ್ರಾಮದಲ್ಲಿ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ಪ್ರಕರಣ ಸಂಬಂಧ ಸಹಾಯಕ ಆಯುಕ್ತರ ಮುಂದೆ ಮನವಿ ಸಲ್ಲಿಸುವಂತೆ 2014ರಲ್ಲಿ ಹೈಕೋರ್ಟ್ನಲ್ಲಿ ಸೂಚನೆ ನೀಡಲಾಗಿತ್ತು. ವಿವಾದದಲ್ಲಿ ಭಾಗೀದಾರರಾದ ಎಂ.ಬಸವರಾಜು ಅರ್ಜಿದಾರ 2014ರಲ್ಲಿ ಸಹಾಯಕ ಆಯುಕ್ತರಾಗಿದ್ದ ನಾಗರಾಜ್ ಅವರ ಮುಂದೆ ದೂರನ್ನು ಸಲ್ಲಿಸಿದ್ದರು. ಪ್ರಕರಣದಲ್ಲಿ ತಮ್ಮ ಪರವಾಗಿ ತೀರ್ಪು ಬರುವಂತೆ ಮಾಡಲು 6 ಲಕ್ಷ ರೂ. ಗಳ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಇದಕ್ಕೆ ಪೂರಕವಾಗಿ 2015ರ ಮಾರ್ಚ್ 15ರಂದು 2 ಲಕ್ಷ ರೂ ಗಳನ್ನು ಲಂಚದ ರೂಪದಲ್ಲಿ ನೀಡಲಾಗಿತ್ತು ಎಂದು ಬಸವರಾಜು ಆರೋಪಿಸಿದ್ದರು.
ಅಲ್ಲದೆ, ಪ್ರಕರಣ ಸಂಬಂಧ ತನಿಖೆ ನಡೆಸುವಂತೆ ಕೋರಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಗೆ (ಪ್ರಸ್ತುತ ಲೋಕಾಯುಕ್ತ)ಕ್ಕೆ ದೂರು ನೀಡಿದ್ದರು. ದೂರನ್ನು ದಾಖಲಿಸಿಕೊಂಡಿದ್ದ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು 2022ರ ಫೆಬ್ರವರಿ 16ರಂದು ಭ್ರಷ್ಟಾಚಾರ ಆರೋಪದಲ್ಲಿ ಎಫ್ಐಆರ್ ದಾಖಲಿಸಿದ್ದರು. ದೂರು ಮತ್ತು ದೂರಿಗೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂದು ಕೋರಿ ನಾಗರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಗುಜರಾತ್ನಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಸಮಿತಿ ರಚನೆ