ಬೆಂಗಳೂರು: ಮಂಗಳೂರಿನ ಶ್ರೀನಿವಾಸ ದಂತ ವಿಜ್ಞಾನಗಳ ಸಂಸ್ಥೆಯಲ್ಲಿ ದಂತ ವೈದ್ಯಕೀಯ ಪದವಿಗೆ (ಬಿಡಿಎಸ್) ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿನಿಯೊಬ್ಬರ ದಾಖಲಾತಿಯನ್ನು ಅನುಮೋದಿಸುವಂತೆ ಹೈಕೋರ್ಟ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್ಜಿಯುಎಚ್ಎಸ್) ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (Karnataka Examinations Authority) ನಿರ್ದೇಶನ ನೀಡಿದೆ.
ಬಿಡಿಎಸ್ ಪ್ರವೇಶಾತಿಯನ್ನು ಅನುಮೋದಿಸದ ಆರ್ಜಿಯುಹೆಚ್ಎಸ್ ಕ್ರಮ ಪ್ರಶ್ನಿಸಿ ವಿದ್ಯಾರ್ಥಿನಿ ನಿಧಿ ಎಸ್. ಶೆಟ್ಟಿಗಾರ್ (Nidhi S Shettigar) ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ವಿದ್ಯಾರ್ಥಿನಿ ಪ್ರವೇಶಾತಿಯನ್ನು 3 ವಾರದಲ್ಲಿ ಅನುಮೋದಿಸಬೇಕು. ಪದವಿ ವ್ಯಾಸಂಗ ಮುಂದುವರಿಸಲು ಮತ್ತು ನವೆಂಬರ್ 16 ರಿಂದ ಆರಂಭವಾಗುವ 2ನೇ ವರ್ಷದ ಪರೀಕ್ಷೆ ಬರೆಯಲು ಅನುಮತಿಸಬೇಕು. ವಿದ್ಯಾರ್ಥಿನಿ ಈಗಾಗಲೇ ಬರೆದಿರುವ ಪ್ರಥಮ ವರ್ಷದ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.
ವಿದ್ಯಾರ್ಥಿನಿ ನಿಧಿ 2019-20ನೇ ಸಾಲಿನಲ್ಲಿ ಶ್ರೀನಿವಾಸ ದಂತ ವಿಜ್ಞಾನಗಳ ಸಂಸ್ಥೆಯಲ್ಲಿ 4 ವರ್ಷದ ಬಿಡಿಎಸ್ ಕೋರ್ಸ್ಗೆ ಪ್ರವೇಶ ಪಡೆದಿದ್ದರು. ವೈದ್ಯಕೀಯ ಶಿಕ್ಷಣ ಇಲಾಖೆ ಕಾಲೇಜಿಗೆ ಕಳುಹಿಸಿದ್ದ ಪ್ರವೇಶ ಪಟ್ಟಿಯಲ್ಲಿ ಅರ್ಜಿದಾರಳ ಹೆಸರಿತ್ತು. ಆದರೆ, ಕೆಇಎ ಪೋರ್ಟಲ್ನಲ್ಲಿ ಪ್ರವೇಶಾತಿ ವಿವರ ಭರ್ತಿಯಾಗಿಲ್ಲ ಎಂಬ ಕಾರಣಕ್ಕೆ ಆರ್ಜಿಯುಹೆಚ್ಎಸ್ ಪ್ರಥಮ ವರ್ಷದ ಪರೀಕ್ಷೆಗೆ ಪ್ರವೇಶ ಪತ್ರ ವಿತರಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಮಧ್ಯಂತರ ಆದೇಶ ನೀಡಿದ್ದರಿಂದ ಪ್ರಥಮ ವರ್ಷದ ಪರೀಕ್ಷೆ ಬರೆಯಲು ಅವಕಾಶ ಸಿಕ್ಕಿತ್ತು. ಇದೀಗ ಅರ್ಜಿ ಇತ್ಯರ್ಥಪಡಿಸಿರುವ ಪೀಠ, ಪ್ರಾಧಿಕಾರಗಳ ಲೋಪದಿಂದ ವಿದ್ಯಾರ್ಥಿ ತೊಂದರೆ ಅನುಭವಿಸುವುದು ಸರಿಯಲ್ಲ ಎಂದಿದ್ದು, ಪ್ರವೇಶಾತಿ ಅನುಮೋದಿಸುವಂತೆ ವಿವಿಗೆ ನಿರ್ದೇಶಿಸಿದೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ಕೋವಿಡ್ ಗೈಡ್ಲೈನ್ಸ್ ಹೊರಡಿಸಿದ ಆರೋಗ್ಯ ಇಲಾಖೆ