ಬೆಂಗಳೂರು: ಮೈತ್ರಿ ಸರ್ಕಾರ ಇದ್ದಾಗ ವಿಧಾನಪರಿಷತ್ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡುವಲ್ಲಿ ಕಾಂಗ್ರೆಸ್ ಸಹಕಾರ ನೀಡಲಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡರ ನಿವಾಸದಲ್ಲಿ ಮಾಜಿ ಕೇಂದ್ರ ಸಚಿವ ಮತ್ತು ವಿಧಾನಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಜೊತೆ ಚರ್ಚಿಸಿದ ಬಳಿಕ ಮಾಧ್ಯಮದಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗ ದೇವೇಗೌಡರು ದೆಹಲಿದೆ ತೆರಳಿ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಮಾತನಾಡಿದ್ದರೂ ಮೈತ್ರಿ ಧರ್ಮಪಾಲನೆ ಆಗಿರಲಿಲ್ಲ. ಆಗಿನ ಪರಿಸ್ಥಿತಿ ಆಗಲೇ ಮುಕ್ತಾಯವಾಗಿದ್ದು, ಇದೀಗ ಹೊಸದೊಂದು ಆರಂಭವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಓದಿ : ಮುಷ್ಕರ ಅಂತ್ಯ: ಬಸ್ ಸಂಚಾರದಿಂದ ನಿಟ್ಟುಸಿರು ಬಿಟ್ಟ ಪ್ರಯಾಣಿಕರು
ನಾಳೆ ಸದನದಲ್ಲಿ ಜೆಡಿಎಸ್ ಪಾತ್ರ ಸ್ಪಷ್ಟವಾಗಿದ್ದು, ಸದನ ಕರೆಯುವ ವಿಚಾರದಲ್ಲಿ ಎಲ್ಲರೂ ಒಂದು ರೀತಿಯಲ್ಲಿ ಆತುರ ತೋರಿಸಿದರು. ಅನಿರ್ದಿಷ್ಟಾವಧಿವರೆಗೆ ಸದನ ಮುಂದೂಡಿಕೆ ಮಾಡಿದ ಬಳಿಕ ಸಂಪುಟ ಸಭೆ ಕರೆಯಬೇಕಾಗಿತ್ತು. ಸಂಪುಟ ಸಭೆಯ ನಿರ್ಣಯ ರಾಜ್ಯಪಾಲರಿಗೆ ತಿಳಿಸಬೇಕು. ಆದರೆ, ಕೆಲವು ವಿಧಾನ ಪರಿಷತ್ ಕೆಲ ಬಿಜೆಪಿ ಸದಸ್ಯರು ರಾಜ್ಯಪಾಲರನ್ನು ಭೇಟಿ ಮಾಡಿದರು. ಈಗ ಪರಿಷತ್ ಕಾರ್ಯದರ್ಶಿ ಮೂಲಕ ಸದನ ಕರೆಯಲಾಗಿದೆ. ಈ ಬೆಳವಣಿಗೆಯನ್ನು ಕಾಂಗ್ರೆಸ್ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತದೆಯೋ ಗೊತ್ತಿಲ್ಲ. ಸಭಾಪತಿ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಚಾರದಲ್ಲಿ ತಮ್ಮ ಪಕ್ಷದ ತಿರ್ಮಾನ ನಾಳೆ ಪ್ರಕಟಿಸಲಿದೆ. ಹಿರಿಯ ಮುಖಂಡ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ನಾಳೆ ಶಾಸಕರ ಸಭೆ ಕರೆದು ಅಂತಿಮ ತಿರ್ಮಾನ ಮಾಡುತ್ತೇವೆ ಎಂದರು.
ಸಿ.ಎಂ.ಇಬ್ರಾಹಿಂ ಸ್ವಂತ ಮನೆಗೆ ವಾಪಸ್ ಬರುವ ಚಿಂತನೆ :
ಸಿಎಂ ಇಬ್ರಾಹಿಂ ಅವರು ಸ್ವಂತ ಮನೆಗೆ ವಾಪಸ್ ಬರುವ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ. ಈ ಬಗ್ಗೆ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಹೀಗಾಗಲೇ ಇಬ್ರಾಹಿಂ ಅವರನ್ನು ಅವರ ನಿವಾಸದಲ್ಲಿ ಭೇಟಿ ಆಗಿ ಮಾತನಾಡಿದ್ದೇನೆ. ಇವತ್ತು ದೇವೇಗೌಡರ ಜೊತೆ ಹಲವು ವಿಷಯಗಳ ಬಗ್ಗೆ ಅವರು ಚರ್ಚಿಸಿದ್ದಾರೆ. ಅವರ ಮನಸ್ಸಿನಲ್ಲಿ ಸ್ವಂತ ಮನೆಗೆ ಬರುವ ಮೂಲಕ ಪಕ್ಷ ಸಂಘಟನೆ ಜವಾಬ್ದಾರಿ ತಗೆದುಕೊಳ್ಳುವ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ ಎಂದು ಹೇಳಿದರು.
ನಾನು ಭೇಟಿ ಮಾಡಿ ಬಂದ ನಂತರ ಕಾಂಗ್ರೆಸ್ನ ಹಲವಾರು ನಾಯಕರು ಭೇಟಿ ಮಾಡಿದ್ದಾರೆ. ಈಗ ಇಬ್ರಾಹಿಂ ಅವರ ಮನೆಯ ಅಡ್ರೆಸ್ ಹುಡಿಕಿಕೊಂಡು ಹೋಗುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ಪರೋಕ್ಷವಾಗಿ ಡಿಕೆಶಿ ವಿರುದ್ಧ ಹೆಚ್ಡಿಕೆ ವ್ಯಂಗ್ಯವಾಡಿದರು.