ಬೆಂಗಳೂರು: ಟ್ರಾಫಿಕ್ ಸಿಗ್ನಲ್ನಲ್ಲಿ ವೈಟ್ ಲೈನ್ ಮೇಲೆ ವಾಹನ ನಿಲ್ಲಿಸಿದ ಆರೋಪ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ 15 ದಿನ ಜೈಲು ಶಿಕ್ಷೆ ಅಥವಾ 200 ರೂಪಾಯಿ ದಂಡ ಪಾವತಿಸುವಂತೆ ವಿಧಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ನಗರದ ಬನ್ನೇರುಘಟ್ಟ ರಸ್ತೆಯ ವೆಂಕಟಾದ್ರಿ ಬಡಾವಣೆ ನಿವಾಸಿ ಬಿ. ಶ್ರೀಪತಿ ರಾವ್ ಸಲ್ಲಿಸಿರುವ ಅರ್ಜಿಯನ್ನು ನ್ಯಾ. ಎಚ್. ಪಿ ಸಂದೇಶ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲ ಗಣಪತಿ ಭಟ್ ಅವರ ವಾದ ಆಲಿಸಿದ ಪೀಠ, ಕೇಂದ್ರ ಕಾನೂನು ಸಚಿವಾಲಯ, ರಾಜ್ಯ ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ನಗರ ಪೊಲೀಸ್ ಆಯುಕ್ತರು ಹಾಗೂ ಜಯನಗರ ಸಂಚಾರ ಠಾಣೆ ಇನ್ಸಪೆಕ್ಟರ್ಗೆ ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.
ಪ್ರಕರಣದ ಹಿನ್ನೆಲೆ: 2017ರ ಜೂನ್ 20ರಂದು ಶ್ರೀಪತಿ ರಾವ್ ತಮ್ಮ ಕಾರಿನಲ್ಲಿ ಜಯನಗರ ಮಾರ್ಗವಾಗಿ ಪ್ರಯಾಣಿಸುತ್ತಿದ್ದರು. ಸೌತ್ ಎಂಡ್ ವೃತ್ತದ ಬಳಿ ಸಿಗ್ನಲ್ ಬಿದ್ದಾಗ ವಾಹನವನ್ನು ನಿಯಂತ್ರಿಸುವ ವೇಳೆ ವೈಟ್-ಸ್ಟಾಪ್ ಲೈನ್ ಮೇಲೆ ನಿಲ್ಲಿಸಿದ್ದರು. ಇದಕ್ಕೆ ಸ್ಥಳದಲ್ಲಿದ್ದ ಪೊಲೀಸ್ ಪೇದೆ ಆಕ್ಷೇಪಿಸಿ 100 ರೂಪಾಯಿ ದಂಡ ಹಾಕಿದ್ದರು. ಆದರೆ, ಶ್ರೀಪತಿ ತಾವು ಸಿಗ್ನಲ್ ದಾಟಿಲ್ಲ. ಬದಲಿಗೆ ಕಾರು ನಿಲ್ಲಿಸುವಾಗ ವೈಟ್ ಲೈನ್ ಮೇಲೆ ಬಂದಿದ್ದು, ದಂಡ ಪಾವತಿಸಲಾಗದು ಎಂದಿದ್ದರು.
ಇದೇ ವಿಚಾರವಾಗಿ ಹಿರಿಯ ಪೊಲೀಸ್ ಅಧಿಕಾರಿಗೆ ಲಿಖಿತ ದೂರು ನೀಡಿ ಅನಗತ್ಯವಾಗಿ ದಂಡ ವಿಧಿಸಿರುವ ಪೇದೆ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು. ಹಾಗೆಯೇ ತಾನು ಸಿಗ್ನಲ್ ಉಲ್ಲಂಘಿಸಿದ್ದರೆ ಆ ಸಂಬಂಧ ಸಿಸಿಟಿವಿ ದೃಶ್ಯಾವಳಿ ನೀಡುವಂತೆಯೂ ಕೋರಿದ್ದರು. ಆದರೆ, ಪೊಲೀಸರು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 117,119 ಹಾಗೂ 130 ಅಡಿ ಎಫ್ಐಆರ್ ದಾಖಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನಗರದ 4 ನೇ ಎಸಿಎಂಎಂ ಟ್ರಾಫಿಕ್ ಕೋರ್ಟ್ 2018ರ ಆಗಸ್ಟ್ 29ರಂದು ಶ್ರೀಪತಿ ಅವರಿಗೆ 200 ರೂಪಾಯಿ ದಂಡ ಪಾವತಿಸಿ ಇಲ್ಲವೇ, 15 ದಿನಗಳ ಸಾಧಾರಣ ಜೈಲು ಶಿಕ್ಷೆ ಅನುಭವಿಸಿ ಎಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸಿಆರ್ಪಿಸಿ ಸೆಕ್ಷನ್ 376 ರ ಅಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ನಗರದ 62ನೇ ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ವಜಾಗೊಳಿಸಿ, ಸಣ್ಣ ಅಪರಾಧ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ಅರ್ಜಿದಾರರು, ಸಣ್ಣ ಅಪರಾಧ ಪ್ರಕರಣಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡದ ಸಿಆರ್ ಪಿಸಿ ಸೆಕ್ಷನ್ 376 ರ ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ. ಅಲ್ಲದೇ, ಎಸಿಎಂಎಂ ನ್ಯಾಯಾಲಯ ವಿಧಿಸಿರುವ ಜೈಲು ಶಿಕ್ಷೆ/ದಂಡವನ್ನು ರದ್ದುಪಡಿಸುವಂತೆ ಮನವಿ ಮಾಡಿದ್ದಾರೆ.