ಬೆಂಗಳೂರು: ಸರ್ಕಾರಿ ಶಾಲೆಗಳು ಪ್ರಾರಂಭವಾಗಿ ಅರ್ಧ ಶೈಕ್ಷಣಿಕ ವರ್ಷ ಕಳೆದಿದ್ದರೂ ಶಾಲಾ ಮಕ್ಕಳಿಗೆ ಕೇವಲ ಒಂದು ಜೊತೆ ಸಮವಸ್ತ್ರ ನೀಡಿದ್ದು, ಇನ್ನೊಂದು ಜೊತೆ ಸಮವಸ್ತ್ರದ ಭಾಗ್ಯವೇ ಇಲ್ಲದಂತಾಗಿದೆ. ಈ ಕುರಿತು ಶಿಕ್ಷಣ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಈ ಶೈಕ್ಷಣಿಕ ವರ್ಷದಲ್ಲಿ ಸಮವಸ್ತ್ರ ವಿತರಣೆ ಕಷ್ಟವಿದೆ. ಮುಂದಿನ ವರ್ಷ ಎಲ್ಲಾ ಸಮಸ್ಯೆಗಳನ್ನು ಸರಿದೂಗಿಸಿ ಸಮವಸ್ತ್ರ ನೀಡಲಾಗುತ್ತದೆ. ಈ ಕುರಿತು ಸರಿಯಾಗಿ ಸಮವಸ್ತ್ರ ನೀಡುವ ಬಗ್ಗೆ ಪ್ಲಾನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಆರ್ಟಿಇ ಕಾರ್ಯಕರ್ತ ನಾಗಸಿಂಹ ಅವರು ಪ್ರತಿಕ್ರಿಸಿದ್ದು, ನೆರೆ ಹಾವಳಿಯಿಂದ ಅದೆಷ್ಟೋ ಮಕ್ಕಳು ಪುಸ್ತಕ ಸೇರಿದಂತೆ ಎಲ್ಲವನ್ನೂ ಕೆಳದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಈ ವರ್ಷ ಮತ್ತೊಂದು ಜೊತೆ ಬಟ್ಟೆ ಕೊಡೋದಿಲ್ಲ ಅಂದರೆ ನಿಜಕ್ಕೂ ಹಾಸ್ಯಾಸ್ಪದ ಸಂಗತಿಯಾಗಿದೆ. ಸರ್ಕಾರ ಅನುದಾನ ಕೊರತೆ ಎಂದೇಳಿಕೊಂಡು ಮಕ್ಕಳಿಗೆ ತೊಂದರೆ ಉಂಟುಮಾಡಬಾರದು. ಸ್ಥಳೀಯ ಶಾಸಕರು, ಇನ್ನಿತರರ ಬಳಿ ದೇಣಿಗೆ ತೆಗೆದಾದರು ಮಕ್ಕಳಿಗೆ ಸಮವಸ್ತ್ರ ವಿತರಿಸಬೇಕು. ಸರ್ಕಾರಕ್ಕೆ ಅದೇನು ಕಷ್ಟದ ಸಂಗತಿ ಅಲ್ಲ ಎಂದರು.