ಬೆಂಗಳೂರು: ಮರಣ ಪ್ರಮಾಣಪತ್ರವಿಲ್ಲದೇ ಕೋವಿಡ್ ಸೋಂಕಿತರ ಶವ ಸಂಸ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ವಿಚಾರಣೆ ವೇಳೆ, ಅಜಿರ್ದಾರರ ಪರ ವಕೀಲ ಶ್ರೀಧರ್ ಪ್ರಭು, ರಾಜ್ಯದಲ್ಲಿ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಸಂಬಂಧಿಸಿದಂತೆ ಏ.21ರಂದು ಸರ್ಕಾರ ವಿವರವಾದ ಮಾರ್ಗಸೂಚಿ ಹೊರಡಿಸಿದ್ದು, ಕೋವಿಡ್ ಸೋಂಕಿತರ ಮೃತದೇಹಗಳ ಅಂತರಜಿಲ್ಲೆ ಅಥವಾ ಅಂತಾರಾಜ್ಯ ಸಾಗಾಟ ಮಾಡುವಂತಿದ್ದರೆ ಮರಣ ಪ್ರಮಾಣಪತ್ರ ಪಡೆಯಬೇಕೆಂದು ಹೇಳಿದೆ.
ಜತೆಗೆ, ಜನರು ತಮ್ಮ ಸ್ವಂತ ಜಮೀನುಗಳಲ್ಲೇ ಶವಸಂಸ್ಕಾರ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದು ಹೊರ ರಾಜ್ಯ ಅಥವಾ ಜಿಲ್ಲೆಗಳಿಗೆ ಸಾಗಿದ ಶವಗಳ ಅಂತ್ಯಸಂಸ್ಕಾರ ಮಾಡಲು ಮರಣ ಪ್ರಮಾಣಪತ್ರದ ಅವಶ್ಯಕತೆ ಇಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ದೂರಿದರು.
ಇದಲ್ಲದೇ ಕಲ್ಲು ಕ್ವಾರಿಗಳನ್ನೂ ಸೋಂಕಿತರ ಅಂತ್ಯ ಸಂಸ್ಕಾರಕ್ಕೆ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಮರಣ ಪ್ರಮಾಣ ಪತ್ರ ಇಲ್ಲದಿದ್ದರೆ, ಸೋಂಕಿತರ ಶವಸಂಸ್ಕಾರಕ್ಕೆಂದೇ ಇರುವ ಶಿಷ್ಠಾಚಾರಗಳ ಪಾಲನೆಯಾಗುವುದು ಕಷ್ಟ. ಇದರಿಂದ, ಸೋಂಕು ಹರಡುವ ಸಾಧ್ಯತೆ ಇದೆ. ಜತೆಗೆ, ಜನರು ಸ್ವಂತ ಜಮೀನುಗಳಲ್ಲಿ ಶವಸಂಸ್ಕಾರ ಮಾಡುತ್ತಾ ಹೋದರೆ ಮತ್ತಷ್ಟು ಗಂಭೀರ ಸಮಸ್ಯೆಗಳು ಎದುರಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಇದು ಗಂಭೀರ ವಿಚಾರವಾಗಿದ್ದು, ಈ ಕುರಿತು ಸರ್ಕಾರ ಪರಿಶೀಲಿಸುವ ಅಗತ್ಯವಿದೆ. ಮರಣ ಪ್ರಮಾಣ ಪತ್ರವಿಲ್ಲದೇ ಶವಸಂಸ್ಕಾರ ಮಾಡುವುದರಿಂದ ಗಂಭೀರ ಪರಿಣಾಮಗಳು ಎದುರಾಗುವ ಸಾಧ್ಯತೆ ಇದೆ. ಮೃತರ ಕುಟುಂಬಗಳಿಗೆ ಯಾವುದೇ ಸೌಲಭ್ಯ ಪಡೆಯಲು ಮರಣ ಪ್ರಮಾಣಪತ್ರದ ಅವಶ್ಯಕತೆ ಇರುತ್ತದೆ. ಮೇಲಾಗಿ ಜನನ ಮತ್ತು ಮರಣ ನೋಂದಣಿ ಕಾಯ್ದೆಯ ಪ್ರಕಾರ ಯಾವುದೇ ಒಬ್ಬ ವ್ಯಕ್ತಿಯ ಸಾವನ್ನು ದಾಖಲಿಸಿ ಪ್ರಮಾಣಪತ್ರ ವಿತರಿಸುವುದು ಕಡ್ಡಾಯವಾಗಿದೆ. ಆದ್ದರಿಂದ, ಸರ್ಕಾರ ಈ ಕುರಿತು ಮುಂದಿನ ವಿಚಾರಣೆ ವೇಳೆ ವಿವರಣೆ ನೀಡಬೇಕು ಎಂದು ತಿಳಿಸಿ ವಿಚಾರಣೆಯನ್ನು ಮೇ 20ಕ್ಕೆ ಮುಂದೂಡಿತು.
ಓದಿ: ಮಂಗಳೂರು: ಚಂಡಮಾರುತದಿಂದ ರಕ್ಷಿಸಲ್ಪಟ್ಟ ಐವರು ಆಸ್ಪತ್ರೆಗೆ ದಾಖಲು