ಬೆಂಗಳೂರು: ಸೋಮವಾರದಿಂದ ಈ ತಿಂಗಳ 30 ರವರೆಗೆ ವಿಶೇಷವಾಗಿ ಒಂದು ವಾರ ಕಾಲ ಸಮರೋಪಾದಿಯಲ್ಲಿ ಬಹಳ ವರ್ಷದಿಂದ ಇತ್ಯರ್ಥಗೊಳ್ಳದೇ ಇರುವ ಕಡತಗಳನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡಲು ಕಂದಾಯ ಸಚಿವ ಆರ್ ವಿ ದೇಶಪಾಂಡೆ ಆದೇಶಿಸಿದ್ದಾರೆ.
ಕಂದಾಯ ಇಲಾಖೆಯಲ್ಲಿ ಕಡತಗಳನ್ನು ಒಂದುವಾರದ ಅವಧಿಯಲ್ಲಿ ಬಾಕಿ ಇರದಂತೆ ವಿಲೇವಾರಿ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಮತ್ತು ಪ್ರಾದೇಶಿಕ ಆಯುಕ್ತರಿಗೆ ಸಚಿವ ದೇಶಪಾಂಡೆ ನಿರ್ದೇಶನ ನೀಡಿದ್ದಾರೆ. ಕಡತಗಳ ವಿಲೇವಾರಿ ಸಂದರ್ಭದಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು, ಇಲಾಖೆಯ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಬೇಕು, ಫೈಲ್ ಕ್ಲಿಯರೆನ್ಸ್ ಮಾಡುವ ಹೆಸರಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಸಚಿವ ದೇಶಪಾಂಡೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಳೆದ ವರ್ಷ ನವೆಂಬರ್12 ರಿಂದ 18 ರವರೆಗೆ ಒಂದು ವಾರ ನಡೆಸಿದ ಕಡತ ವಿಲೇವಾರಿ ಸಂದರ್ಭದಲ್ಲಿ2.50 ಲಕ್ಷ ಫೈಲ್ಗಳನ್ನು ವಿಲೇವಾರಿ ಮಾಡಲಾಗಿತ್ತು. ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಕಡತಗಳು ಬಾಕಿ ಉಳಿದಿವೆ ಎನ್ನುವ ದೂರುಗಳ ಹಿನ್ನೆಲೆಯಲ್ಲಿ ವಿಶೇಷವಾದ ಕಾರ್ಯಕ್ರಮದಲ್ಲಿ ಕಡತಗಳ ಕ್ಲಿಯರೆನ್ಸ್ ಮಾಡಲಾಗುತ್ತಿದೆ.